July 15, 2026

ಹೂವಿನ ತೋಟದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ಕೂಲಿ ಕಾರ್ಮಿಕ ಸಾವು; ನಾಟಿ ಔಷಧಕ್ಕೆ ಮೊರೆಹೋದದ್ದೇ ದುರಂತಕ್ಕೆ ಕಾರಣ?

ಭಟ್ಕಳ: ತಾಲೂಕಿನ ಮೂಡಶಿರಾಲಿ-ಬೆಂಗ್ರೆ ಗ್ರಾಮದಲ್ಲಿ ಹೂವಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿಷಪೂರಿತ ಹಾವು ಕಚ್ಚಿದ ಪರಿಣಾಮ ಕೂಲಿ ಕಾರ್ಮಿಕರೊಬ್ಬರು ಆಸ್ಪತ್ರೆ ತಲುಪುವ ಮುನ್ನವೇ ಮೃತಪಟ್ಟಿರುವ ದುರ್ಘಟನೆ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

​ಮೂಡಶಿರಾಲಿ-ಬೆಂಗ್ರೆ ನಿವಾಸಿ ರಾಮಚಂದ್ರ ಬಡಿಯಾ ನಾಯ್ಕ (50) ಮೃತಪಟ್ಟ ದುರ್ದೈವಿ. ಇವರು ಕೂಲಿ ಕೆಲಸ ಮಾಡಿಕೊಂಡೇ ಸ್ವಂತ ಹೂವಿನ ತೋಟವನ್ನು ಸಹ ನಿರ್ವಹಿಸುತ್ತಿದ್ದರು.

ಘಟನೆಯ ವಿವರ:

ಸೋಮವಾರ ಬೆಳಿಗ್ಗೆ ಸುಮಾರು 6 ಗಂಟೆಯ ವೇಳೆಗೆ ರಾಮಚಂದ್ರ ಅವರು ಎಂದಿನಂತೆ ತಮ್ಮ ತೋಟದಲ್ಲಿ ಹೂ ಕೊಯ್ಯಲು ತೆರಳಿದ್ದರು. ಈ ಸಂದರ್ಭದಲ್ಲಿ ಅಡಗಿದ್ದ ವಿಷಪೂರಿತ ಹಾವೊಂದು ಅವರಿಗೆ ಕಚ್ಚಿದೆ. ಹಾವು ಕಚ್ಚಿದ ತಕ್ಷಣ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ಕಂಡು ಕುಟುಂಬಸ್ಥರು ತಕ್ಷಣ ಮನೆಗೆ ಕರೆತಂದಿದ್ದಾರೆ.

ನಾಟಿ ಔಷಧ ಫಲಿಸದೆ ತಂಗಿದ ಪ್ರಾಣ:

ಹಾವು ಕಚ್ಚಿದ ಆರಂಭಿಕ ಪ್ರಮುಖ ಕ್ಷಣಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಬದಲಿಗೆ, ಸ್ಥಳೀಯವಾಗಿ ನಾಟಿ ಔಷಧ ನೀಡಿ ಚಿಕಿತ್ಸೆ ನೀಡಲು ಪ್ರಯತ್ನಿಸಲಾಯಿತು ಎನ್ನಲಾಗಿದೆ. ಆದರೆ ಸಮಯ ಕಳೆದಂತೆ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಯಾವುದೇ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಕೊನೆಗೆ ಹೆಚ್ಚಿನ ಚಿಕಿತ್ಸೆಗಾಗಿ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲೇ ತಡವಾಗಿದ್ದು, ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ತಲುಪುವ ಮೊದಲೇ ರಾಮಚಂದ್ರ ಅವರು ಮೃತಪಟ್ಟಿರುವುದಾಗಿ ಪ್ರಕಟಿಸಿದರು.

​ಈ ಕುರಿತು ಮೃತರ ಪುತ್ರ ಧನರಾಜ ನಾಯ್ಕ ಅವರು ನೀಡಿದ ದೂರಿನ ಮೇರೆಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು (UDR) ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಾರ್ವಜನಿಕರಲ್ಲಿ ವಿನಂತಿ (ಎಚ್ಚರಿಕೆ ಸಂದೇಶ): ಗ್ರಾಮೀಣ ಭಾಗಗಳಲ್ಲಿ ಹಾವು ಕಚ್ಚಿದ ತಕ್ಷಣ ನಾಟಿ ಔಷಧ, ಮಂತ್ರ-ತಂತ್ರಗಳಿಗೆ ಮೊರೆಹೋಗಿ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಬೇಡಿ. ತಾಲೂಕು ಸರ್ಕಾರಿ ಆಸ್ಪತ್ರೆ ಸೇರಿದಂತೆ ಎಲ್ಲಾ ಪ್ರಮುಖ ಆಸ್ಪತ್ರೆಗಳಲ್ಲಿ ಹಾವಿನ ವಿಷ ನಿರೋಧಕ ಲಸಿಕೆಗಳು (Anti-Snake Venom) ಉಚಿತವಾಗಿ ಲಭ್ಯವಿರುತ್ತವೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸುವುದರಿಂದ ಜೀವ ಉಳಿಸಬಹುದಾಗಿದೆ

About The Author

error: Content is protected !!