July 15, 2026

ವರದಕ್ಷಿಣೆ ಕಿರುಕುಳ ಆರೋಪ: ಭಟ್ಕಳದಲ್ಲಿ ಪತಿ ಸೇರಿ ಐವರ ವಿರುದ್ಧ ಪ್ರಕರಣ ದಾಖಲು

ಭಟ್ಕಳ: ವಿವಾಹವಾದಾಗಿನಿಂದಲೂ ಹೆಚ್ಚುವರಿ ವರದಕ್ಷಿಣೆ ತರುವಂತೆ ಒತ್ತಾಯಿಸಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತ ಬಂದಿರುವ ಹಿನ್ನೆಲೆಯಲ್ಲಿ, ಮಹಿಳೆಯೊಬ್ಬರು ತನ್ನ ಪತಿ ಮತ್ತು ಆತನ ಕುಟುಂಬದ ಐದು ಜನರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ತಾಲ್ಲೂಕಿನ ಗೊರಟೆಯ ಜಾಣನಮನೆ ನಿವಾಸಿಯಾದ ಮಾನಸಾ (ಕಾವ್ಯ) ಮೊಗೇರ್ ಎಂಬುವವರೇ ದೂರು ನೀಡಿದ ಮಹಿಳೆಯಾಗಿದ್ದಾರೆ. ಇವರ ದೂರಿನನ್ವಯ ಪತಿ ಶ್ರೀಧರ ಮೊಗೇರ್, ಮಾವ ಪರಮೇಶ್ವರ ಶನಿಯಾರ ಮೊಗೇರ್, ಅತ್ತೆ ಪದ್ಮಾವತಿ ಪರಮೇಶ್ವರ ಮೊಗೇರ್ ಹಾಗೂ ಮೈದುನರಾದ ಯೋಗೇಶ್ವರ ಪರಮೇಶ್ವರ ಮೊಗೇರ್ ಮತ್ತು ಆನಂದ ಪರಮೇಶ್ವರ ಮೊಗೇರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನ ವಿವರ:

ಸಂತ್ರಸ್ತೆ ಮಾನಸಾ ಅವರ ವಿವಾಹವು 2016ರಲ್ಲಿ ಜರುಗಿದ್ದು, ಮದುವೆಯಾದ ಕೆಲವೇ ದಿನಗಳಲ್ಲಿ ಆರೋಪಿಗಳು ವರದಕ್ಷಿಣೆಗಾಗಿ ಪೀಡಿಸಲು ಆರಂಭಿಸಿದ್ದರು. ತವರು ಮನೆಯಿಂದ ಹಣ ಹಾಗೂ ಚಿನ್ನಾಭರಣ ತರುವಂತೆ ನಿರಂತರವಾಗಿ ಮಾನಸಿಕ ಒತ್ತಡ ಹೇರುತ್ತಿದ್ದರು. ಒಂದು ವೇಳೆ ಹಣ ತರದಿದ್ದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕವಾಗಿ ಹಿಂಸಿಸುವುದರ ಜೊತೆಗೆ ದೈಹಿಕವಾಗಿಯೂ ಹಲ್ಲೆ ನಡೆಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಿರುಕುಳದ ತೀವ್ರತೆ ಹೆಚ್ಚಾದ ಕಾರಣ 2024ರಲ್ಲಿ ಮಹಿಳೆಯನ್ನು ಮನೆಯಿಂದಲೇ ಹೊರಹಾಕಲಾಗಿತ್ತು. ತದನಂತರವೂ ಕುಟುಂಬಸ್ಥರ ನಡವಳಿಕೆಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ. ಇಷ್ಟು ವರ್ಷಗಳ ಕಾಲ ಕೌಟುಂಬಿಕ ಜೀವನ ಹಾಗೂ ನೆಮ್ಮದಿಯನ್ನು ಉಳಿಸಿಕೊಳ್ಳುವ ಏಕೈಕ ಉದ್ದೇಶದಿಂದ ಎಲ್ಲ ನೋವುಗಳನ್ನು ಸಹಿಸಿಕೊಂಡಿದ್ದರೂ, ದಿನಕಳೆದಂತೆ ಕಿರುಕುಳ ಮುಂದುವರಿದ ಹಿನ್ನೆಲೆಯಲ್ಲಿ ಅಂತಿಮವಾಗಿ ಕಾನೂನಿನ ಮೊರೆ ಹೋಗಿರುವುದಾಗಿ ಸಂತ್ರಸ್ತೆ ತಿಳಿಸಿದ್ದಾರೆ.
ಪ್ರಸ್ತುತ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಹಾಗೂ ಕೌಟುಂಬಿಕ ದೌರ್ಜನ್ಯ ಸೇರಿದಂತೆ ವಿವಿಧ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ತನಿಖೆಯನ್ನು ಕೈಗೊಂಡಿದ್ದಾರೆ.

About The Author

error: Content is protected !!