July 27, 2026

ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದಲ್ಲಿ ಪಾಲಕರ ಸಮ್ಮಿಲನ ಕಾರ್ಯಕ್ರಮ ಸಂಪನ್ನ

ಭಟ್ಕಳ (ಜುಲೈ 25): “ಶಿಸ್ತುಬದ್ಧ ಜೀವನವೇ ಉತ್ತಮ ಭವಿಷ್ಯಕ್ಕೆ ಅಡಿಪಾಯ” ಎಂದು ತೇರ್ನಮಕ್ಕಿಯ ಕೆ.ಪಿ.ಎಸ್. ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲ ರಾಜೇಶ್ ನಾಯ್ಕ್ ಹೇಳಿದರು.

ತಾಲೂಕಿನ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದಲ್ಲಿ ಜರುಗಿದ 2026-27 ನೇ ಸಾಲಿನ ಪಾಲಕರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ನಿರಂತರ ಅಧ್ಯಯನ, ನಿಯಮಿತ ಆಹಾರ, ವ್ಯಾಯಾಮದಿಂದ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಸಾಧನೆ ಮಾಡಬಹುದು” ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಮತ್ತೋರ್ವ ಮುಖ್ಯ ಅತಿಥಿಯಾಗಿದ್ದ ಬಿ.ಕಾಂ. ಪೂರ್ವ ವಿದ್ಯಾರ್ಥಿ ಹಾಗೂ ಲೆಕ್ಕ ಪರಿಶೋಧಕ ಪ್ರಜ್ವಲ್ ಗೋಲಿ ಮಾತನಾಡಿ, “ಸಿಎ (CA) ಅಧ್ಯಯನದಿಂದ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಲೆಕ್ಕ ಪರಿಶೋಧನೆ, ತೆರಿಗೆ, ಹಣಕಾಸು, ಸಲಹಾ ಸೇವೆಗಳು ಸೇರಿದಂತೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ” ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳಾದ ರಮೇಶ್ ಖಾರ್ವಿ ಮತ್ತು ಶ್ರೀಧರ್ ಶಾನಭಾಗ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶೈಕ್ಷಣಿಕ ವರ್ಷ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಹಾಗೆಯೇ ಮಹಾವಿದ್ಯಾಲಯದಲ್ಲಿ ಜರುಗುವ ಪಠ್ಯ, ಪಠ್ಯೇತರ ಚಟುವಟಿಕೆಗಳು, ಹಾಜರಾತಿ, ನೇಮಕಾತಿ, ಯು.ಯು.ಸಿ.ಎಮ್.ಎಸ್. (UUCMS) ಮತ್ತು ಕಾಲೇಜಿನಿಂದ ನೀಡಲಾಗುವ ವಿದ್ಯಾರ್ಥಿವೇತನದ ಕುರಿತು ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ವಿಭಾಗದ ಉಪ ಪ್ರಾಂಶುಪಾಲರು ಮಾಹಿತಿ ನೀಡಿದರು.

ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀನಾಥ್ ಪೈ ಪ್ರಸ್ತಾವಿಕ ಮಾತುಗಳನ್ನಾಡಿದರು. ಆಶಾ ಡಿಸೋಜಾ ಅತಿಥಿಗಳನ್ನು ಪರಿಚಯಿಸಿದರು, ದೇವೇಂದ್ರ ಕಿಣಿ ಮತ್ತು ವಿಭಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ನಿಶಾ ಗೋನ್ಸಾಲ್ವಿಸ್ ಹಾಗೂ ಉಪನ್ಯಾಸಕ ಶಾಂತರಾಯ ಗೊಂಡ ವಂದಿಸಿದರು.

About The Author

error: Content is protected !!