November 19, 2025

ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲೋಕೇಶ್ ಹೃದಯಾಘಾತದಿಂದ ನಿಧನ ..

ಕೆ ಆರ್ ಪೇಟೆ : ಹೇಮಾವತಿ ಬಡಾವಣೆಯಲ್ಲಿರುವ ಅವರ ಸ್ವಗೃಹದಲ್ಲಿ ವೀರಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಶಾಸಕರು ಹಾಗೂ ಸಾರ್ವಜನಿಕರು.. ಮುಗಿಲು ಮುಟ್ಟಿದ ಆಕ್ರಂದನ..

ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗಮಂಗಲ ತಾಲೂಕಿನ ಮೈಲಾರಪಟ್ಟಣದ ಲೋಕೇಶ್ ಅವರು ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ಪಂಜಾಬ್ ರಾಜ್ಯದ ಪಠಾಣ್ ಕೋಠ’ನಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತಂದು, ಬೆಂಗಳೂರಿನಿAದ ಸಕಲ ಸರ್ಕಾರಿ ಗೌರವಗಳೊಂದಿಗೆ ಪಾರ್ಥಿವ ಶರೀರವನ್ನು ಗಡಿ ಭದ್ರತಾ ಪಡೆಯ ವಾಹನದಲ್ಲಿ ಕೃಷ್ಣರಾಜಪೇಟೆ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ವಾಸವಾಗಿದ್ದ ಮನೆಯ ಬಳಿಗೆ ತಂದು ಸಾರ್ವಜನಿಕರ ದರ್ಶನದ ನಂತರ ಮೈಲಾರಪಟ್ಟಣಕ್ಕೆ ಕೊಂಡೊಯ್ಯಲಾಯಿತು.

ಕಳೆದ 25 ವರ್ಷಗಳಿಂದ ಭಾರತೀಯ ಸೇನೆಯ ಗಡಿ ಭದ್ರತಾ ಪಡೆಯಲ್ಲಿ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಲೋಕೇಶ್ ಅವರು ಕೆ.ಆರ್. ಪೇಟೆ ಪಟ್ಟಣದ ನಿವಾಸಿಗಳಾದ ಜಯಮ್ಮ,ರಾಮೇಗೌಡ ಅವರ ಪುತ್ರಿ ಆಶಾ ಅವರನ್ನು ವಿವಾಹವಾಗಿದ್ದು, ಪತ್ನಿ ಹಾಗೂ ಹರ್ಷಿಣಿ(12), ಹರಿಣಿ(7) ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸುಖೀ ದಾಂಪತ್ಯ ಜೀವನವನ್ನು ನಡೆಸುತ್ತಿದ್ದರು. ನೆನ್ನೆ ತಡರಾತ್ರಿ ಪಂಜಾಬ್ ಜಿಲ್ಲೆಯ ಪಟಾಣ್ ಕೊಠ’ನ ಗಡಿಯ ರೇಖೆಯ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ತೀವ್ರ ಹೃದಯಘಾತಕ್ಕೆ ಒಳಗಾಗಿ ಸಾವಿಗೆ ಶರಣಾದರು. ಇಂದು ಮುಂಜಾನೆ ಭಾರತೀಯ ಸೇನೆಯ ವಿಶೇಷ ವಿಮಾನದಲ್ಲಿ ಲೋಕೇಶ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತಂದು ಅಲ್ಲಿಂದ ನೇರವಾಗಿ ಅವರು ಕೃಷ್ಣರಾಜಪೇಟೆ ಪಟ್ಟಣದಲ್ಲಿ ವಾಸವಾಗಿದ್ದ ಹೇಮಾವತಿ ಬಡಾವಣೆಯಲ್ಲಿನ ಅವರ ಸ್ವಗೃಹದ ಬಳಿ ಪಾರ್ಥಿವ ಶರೀರವನ್ನು ಇಟ್ಟು ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ತಾಲೂಕಿನ ಮಾಕವಳ್ಳಿ ಗ್ರಾಮದಲ್ಲಿ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಮಂಜು ಅವರು ಸಭೆಯನ್ನು ಅರ್ಧಕ್ಕೆ ಮೊಟುಕುಗೊಳಿಸಿ ಕೆ.ಆರ್.ಪೇಟೆ ಪಟ್ಟಣಕ್ಕೆ ಆಗಮಿಸಿ , ವೀರ ಯೋಧರಾದ ಲೋಕೇಶ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪಮಾಲೆ ಹಾಕಿ ಅಂತಿಮ ನಮನ ಸಲ್ಲಿಸಿದರು. ಸಾರ್ವಜನಿಕರ ದರ್ಶನದ ನಂತರ ಲೋಕೇಶ್ ಅವರ ಪಾರ್ಥಿವ ಶರೀರವನ್ನು ಗಡಿ ಭದ್ರತಾ ಪಡೆಯ ವಿಶೇಷ ವಾಹನದಲ್ಲಿಟ್ಟು ಅವರ ಹುಟ್ಟೂರು ನಾಗಮಂಗಲ ತಾಲೂಕಿನ ಮೈಲಾರ ಪಟ್ಟಣ ಗ್ರಾಮಕ್ಕೆ ಕೊಂಡೊಯ್ಯಲಾಯಿತು.

ಕ್ಷೇತ್ರದ ಶಾಸಕರಾದ ಹೆಚ್.ಟಿ. ಮಂಜು, ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್, ತಹಶೀಲ್ದಾರ್ ಲೆಫ್ಟಿನೆಂಟ್ ಕರ್ನಲ್ ಅಶೋಕ್ ಕುಮಾರ್, ಮಾಜಿಶಾಸಕರಾದ ಕೆ.ಬಿ. ಚಂದ್ರಶೇಖರ್, ಬಿ.ಪ್ರಕಾಶ್, ಪುರಸಭೆ ಅಧ್ಯಕ್ಷೆ ಪಂಕಜ ಪ್ರಕಾಶ್, ಸದಸ್ಯರಾದ ಡಿ ಪ್ರೇಮ ಕುಮಾರ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆನಂದ್ ಕುಮಾರ್, ಪುರಸಭೆ ಮಾಜಿ ಸದಸ್ಯ ಕೆ.ಆರ್. ನೀಲಕಂಠ, ಪಟ್ಟಣ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕಿ ಬಿ. ಸುಮಾರಾಣಿ, ಸಮಾಜ ಸೇವಕರಾದ ಆಲಂಬಾಡಿ ಕಾವಲು ಮಲ್ಲಿಕಾರ್ಜುನ, ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಮಾಜಿ ಅಧ್ಯಕ್ಷ ವಿ.ಡಿ. ಹರೀಶ್ ಸೇರಿದಂತೆ ನೂರಾರು ಲೋಕೇಶ್ ಅವರ ಅಭಿಮಾನಿಗಳು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!