March 29, 2026

ದುಡುಕಿನ ಚಾಲನೆಗೆ ಮತ್ತೊಂದು ಬಲಿ; ಟಿಪ್ಪರ್ ಡಿಕ್ಕಿಗೆ ಬೈಕ್ ಸವಾರ ಸಾವು

ಭಟ್ಕಳ: ದುಡುಕಿನ ಹಾಗೂ ನಿರ್ಲಕ್ಷ್ಯ ಚಾಲನೆಯಿಂದ ಮತ್ತೊಂದು ಜೀವ ಬಲಿಯಾಗಿರುವ ಘಟನೆ ತಾಲೂಕಿನ ಎಡಭಡ್ರು ಕ್ರಾಸ್ ಬಳಿ ನಡೆದಿದೆ. ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ.
ಮೃತರನ್ನು ತೂದಳ್ಳಿ, ಹಿರೆದೋಮಿ ನಿವಾಸಿ ನಾಗರಾಜ ಸುಕ್ರಾ ಹರಿಕಾಂತ (21) ಎಂದು ಗುರುತಿಸಲಾಗಿದೆ. ಇವರು ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದರು.

ರಾಷ್ಟ್ರೀಯ ಹೆದ್ದಾರಿ–66ರ ಹೊನ್ನಾವರ–ಭಟ್ಕಳ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಹೊನ್ನಾವರ ಕಡೆಯಿಂದ ಮುರ್ಡೇಶ್ವರ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಲಾರಿ, ದುಡುಕಿನಿಂದ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ, ಅದೇ ದಿಕ್ಕಿನಲ್ಲಿ ಸಾಗುತ್ತಿದ್ದ ನಾಗರಾಜ ಅವರ ಕೆಟಿಎಂ ಬೈಕ್‌ಗೆ ಹಿಂಭಾಗದಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ಪರಿಣಾಮ ನಾಗರಾಜ ಅವರು ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದು ತಲೆಗೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಸಂಬಂಧ ಹೇಮಂತ ನಾರಾಯಣ ಹರಿಕಾಂತ ಅವರು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಟಿಪ್ಪರ್ ಲಾರಿ ಚಾಲಕ ದಿನೇಶ್ ರಾಮಚಂದ್ರ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author

error: Content is protected !!