March 29, 2026

ಶ್ರೀ ರಾಮ ಕ್ಷೇತ್ರದಲ್ಲಿ 66ನೇ ವರ್ಷದ ರಾಮನಾಮ ಸಪ್ತಾಹ & ಬ್ರಹ್ಮರಥೋತ್ಸವ

ಭಟ್ಕಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ವತಿಯಿಂದ ಧರ್ಮಸ್ಥಳ ತಾಲೂಕಿನ ನಿತ್ಯಾನಂದನಗರದಲ್ಲಿ ಮಾರ್ಚ್ 20ರಿಂದ 29ರವರೆಗೆ 66ನೇ ವರ್ಷದ ‘ಶ್ರೀ ರಾಮನಾಮ ಸಪ್ತಾಹ’, ಪ್ರತಿಷ್ಠಾ ಜಾತ್ರಾ ಮಹೋತ್ಸವ ಹಾಗೂ ಮಹಾ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ಶ್ರೀರಾಮ ಸೇವಾಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ್ ತಿಳಿಸಿದ್ದಾರೆ.
ನಗರದ ನಿಚ್ಚಲಮಕ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾಹಿತಿ ನೀಡಿದರು.
ಜಗದ್ಗುರು ಪೂಜ್ಯ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಸ್ಮರಣೆಯೊಂದಿಗೆ ಮಹಾಮಂಡಲೇಶ್ವರ ಶ್ರೀ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಮಾರ್ಚ್ 20ರಂದು ರಾಮನಾಮ ಸಪ್ತಾಹ ಉದ್ಘಾಟನೆಯಾಗಲಿದ್ದು, ಬಳಿಕ ಗಣಪತಿ ದೇವರ ಬಲಿ ಉತ್ಸವ, ರಜತ ಪಾಲಕಿ ಉತ್ಸವ, ಪುಷ್ಪ ರಥೋತ್ಸವ, ಚಂದ್ರಮಂಡಲ ರಥೋತ್ಸವ, ಬೆಳ್ಳಿ ರಥೋತ್ಸವ ಹಾಗೂ ಹನುಮಾನ್ ರಥೋತ್ಸವಗಳು ನಡೆಯಲಿವೆ.


ಮಾರ್ಚ್ 27ರಂದು ಮಹಾ ಬ್ರಹ್ಮರಥೋತ್ಸವ ಹಾಗೂ ನೇಮೋತ್ಸವ ಜರುಗಲಿದ್ದು, ಮಾರ್ಚ್ 29ರಂದು ಆದಿ ಪಜಿರಡ್ಕ ಶ್ರೀ ದೇವಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಮತ್ತು ನೇಮೋತ್ಸವ ನಡೆಯಲಿದೆ.
ಮಾರ್ಚ್ 20ರಿಂದ 29ರವರೆಗೆ ಅಹೋರಾತ್ರಿ ಶ್ರೀ ರಾಮ ತಾರಕ ಮಂತ್ರ ಭಜನೆ ನಡೆಯಲಿದೆ.
ನಾಮಧಾರಿ ಸಮಾಜ ಸೇರಿದಂತೆ ಸಮಸ್ತ ಹಿಂದೂ ಸಮಾಜದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀರಾಮ ಸೇವಾಸಮಿತಿ ಮನವಿ ಮಾಡಿದೆ.


ಪತ್ರಿಕಾಗೋಷ್ಠಿಯಲ್ಲಿ ಅರುಣ ನಾಯ್ಕ, ಸುಬ್ರಾಯ ನಾಯ್ಕ, ನಾಗೇಂದ್ರ ನಾಯ್ಕ, ಕೃಷ್ಣ ನಾಯ್ಕ, ಎಂ.ಕೆ. ನಾಯ್ಕ, ಕೆ.ಆರ್. ನಾಯ್ಕ, ಡಿ.ಎಲ್. ನಾಯ್ಕ, ಗೋವಿಂದ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

error: Content is protected !!