March 29, 2026

ಜಾಲಿಯಲ್ಲಿ ಅರ್ಥಪೂರ್ಣವಾಗಿ ನೆರವೇರಿದ ‘ಸ್ತ್ರೀ ನಮನ’ ಕಾರ್ಯಕ್ರಮ


ಭಟ್ಕಳ: ತಾಲೂಕಿನ ಜಾಲಿಯ ನಾಮಧಾರಿ ಸಭಾಭವನದಲ್ಲಿ ರವಿವಾರ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ (ರಿ.) ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾದ “ಸ್ತ್ರೀ ನಮನ” ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.
ಸಮಾಜದಲ್ಲಿ ಮಹತ್ವದ ಸೇವೆ ಸಲ್ಲಿಸಿದ ನೂರಕ್ಕೂ ಅಧಿಕ ಹೆರಿಗೆಗಳಿಗೆ ಸಹಾಯ ಮಾಡಿದ ಸೂಲಗಿತ್ತಿಯರು ಹಾಗೂ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಸೋಬಾನ ಪದಗಳನ್ನು ಹಾಡುವ ಮೂಲಕ ಸೇವೆ ಮಾಡಿದ ಲಕ್ಷ್ಮೀ ತಿಮ್ಮಯ್ಯ ನಾಯ್ಕ ಮತ್ತು ಮಳ್ಳಿ ದುರ್ಗಪ್ಪ ನಾಯ್ಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಅದೇ ರೀತಿ ಆಶಾ ಕಾರ್ಯಕರ್ತೆ ಸೋಮಾವತಿ ರಾಮಕೃಷ್ಣ ಮೊಗೇರ, ಶ್ರೀ ಸಿದ್ಧಿವಿನಾಯಕ ಭಜನಾ ಮಂಡಳಿಯ ಸದಸ್ಯೆ ಸುಜಾತ ನಿಲೇಶ ಆಚಾರ್ಯ ಹಾಗೂ ವೈದ್ಯೆ ಮೇಘನಾ ಮೊಗೇರ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಕ್ಷಕಿ ಶ್ವೇತಾ ರಾಠೋಡ್ ಮಹಿಳಾ ನಾಯಕತ್ವದ ಮಹತ್ವದ ಕುರಿತು ಮಾತನಾಡಿ, ಫೌಂಡೇಷನ್‌ನ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ ಪೂರ್ಣಿಮಾ ಸೋಮಕುಮಾರ್ ಫೌಂಡೇಷನ್‌ನ ಜನಪರ ಕಾರ್ಯಕ್ರಮಗಳ ಕುರಿತು ವಿವರಿಸಿದರು.


ಈ ವೇಳೆ ಮಹಿಳೆಯರಿಗಾಗಿ ನೃತ್ಯ, ಗಾಯನ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ನಡೆದಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಯಮುನಾ ಅಣ್ಣಪ್ಪ ಮೊಗೇರ, ಲೀಲಾವತಿ, ಗಜಾನನ ಆಚಾರ್ಯ, ದಿವ್ಯಾ ಶ್ರೀಧರ ಖಾರ್ವಿ, ಶ್ರೀದೇವಿ ಗೊಂಡ ಹಾಗೂ ನೇತ್ರಾ ರಮೇಶ್ ನಾಯ್ಕ ಉಪಸ್ಥಿತರಿದ್ದರು.

About The Author

error: Content is protected !!