April 17, 2026

ಬರ್ಗಿ ಸಂಸ್ಕೃತೋತ್ಸವದಲ್ಲಿ ರಾಮಾಯಣ ಪರೀಕ್ಷೆಯ ಸಾಧಕಿಯರಿಗೆ ಗೌರವ

ಬರ್ಗಿ ಸಂಸ್ಕೃತೋತ್ಸವದಲ್ಲಿ ಅಭಿನಂದನೆಗೊಂಡ ನವ್ಯ – ನಾಗಶ್ರೀ


ಕುಮಟಾ : ಬೆಂಗಳೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನದ ರಾಮಾಯಣ ಪರೀಕ್ಷೆಯನ್ನು ಬರೆದಿದ್ದ ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ 33 ವಿದ್ಯಾರ್ಥಿಗಳಲ್ಲಿ ರಾಂಕ್ ವಿಜೇತ ಐವರು ಬಾಲಕಿಯರಿಗೆ ಸ್ಥಳೀಯ ಗ್ರಾಮ ಪಂಚಾಯತದ ಸಭಾಭವನದಲ್ಲಿ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಕರ್ನಾಟಕ ಸಂಸ್ಕೃತ ಪರಿಷತ್, ಕನ್ನಡ ಭಾರತಿ ಪ್ರಪಂಚ, ಬರ್ಗಿ ಪ್ರೌಢ ಶಾಲೆಯ ಶ್ರೀ ಘಟಬೀರ ಪ್ರಸಾದಿತ ಹಳೆಯ ವಿದ್ಯಾರ್ಥಿಗಳ ಸಂಘ, ತೊರ್ಕೆಯ ಆನಂದ ಕವರಿ ಪ್ರತಿಷ್ಠಾನ ಹಾಗೂ ಗಜಾನನ ನಾಯಕ್ ಅಭಿಮಾನಿ ಬಳಗದ ಸಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡ “ಬರ್ಗಿ ಸಂಸ್ಕೃತೋತ್ಸವ 2026” -ರ ಸಮಾರಂಭದಲ್ಲಿ ಗೌರವಿಸಲಾಯಿತು.


100 ಕ್ಕೆ 100 ಅಂಕಗಳಿಂದ ಪ್ರಥಮರಾದ ಕಾವ್ಯ ಅರುಣ ಗಾವಡಿಯವರಿಗೆ “ಶ್ರೀರಾಮ ಸುಪ್ರಸಾದ ಸಿಂಧು” ಎಂತಲೂ, 96 ಅಂಕದೊಂದಿಗೆ ದ್ವಿತೀಯ ಸ್ಥಾನದ ಕಾಂಚನ ಕಮಲಾಕರ ಗಾವದಿಯವರಿಗೆ ” ಪ್ರಭು ಶ್ರೀರಾಮ ಕಥಾ ಕಾಂಚನ ವಲ್ಲರೀ” ಎಂದು, 95 ಅಂಕಗಳನ್ನು ಪಡೆದದು ತೃತೀಯ ಸ್ಥಾನದಲ್ಲಿದ್ದ ಆಶಿತಾ ರಾಜು ಅರ್ವಣಕರರವರಿಗೆ ” ಸೀತಾಲೋಲ ಕೃಪಾ ಮಂದಾಕಿನಿ”ಯೆಂದು, 94 ಅಂಕಗಳನ್ನು ಪಡೆದು ಚತುರ್ಥ ಸ್ಥಾನದಲ್ಲಿದ್ದ ರಮ್ಯಾ ಉಮೇಶ ಪಟಗಾರರವರಿಗೆ ” ಶ್ರೀರಾಮ ರಮ್ಯ ಕಾವ್ಯ ದರ್ಶಿನಿ” ಹಾಗೂ 93 ಅಂಕಗಳೊಂದಿಗೆ ಐದನೆಯ ಸ್ಥಾನವನ್ನು ಹೊಂದಿದ ಗೌತಮಿ ನಾರಾಯಣ ಹರಿಕಂತ್ರವರಿಗೆ ” ಶ್ರೀರಾಮ ಕಥಾಮೃತ ಸಿಂಚನ ” ಎಂಬ ಅಭಿದಾನವನ್ನಿತ್ತು ಪದಕ, ಫಲಕ ಹಾಗೂ ಪ್ರಮಾಣ ಪತ್ರಗಳೊಂದಿಗೆ ಶಾಲು ಹೊದಿಸಿ ಅತ್ಯಂತ ಆಪ್ತವಾಗಿ ಮಾನಿಸಲಾಯಿತು.


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತದ ಮಾಜಿ ಜನಪರ ಸದಸ್ಯರಾದ ಪ್ರದೀಪ ನಾಯಕ್ ದೇವರಬಾವಿ, ಗಾಯತ್ರಿ ಗೌಡ, ಕರ್ನಾಟಕ ರಣಧೀರ ವೇದಿಕೆಯ ಕುಮಟಾ ತಾಲ್ಲೂಕಾ ಘಟಕದ ಅಧ್ಯಕ್ಷರಾದ ಮಿರ್ಜಾನಿನ ಕನ್ನಡದ ಸಮೀರರು, ತಾಲ್ಲೂಕಾ ಪಂಚಾಯತದ ಮಾಜಿ ಅಧ್ಯಕ್ಷರಾದ ವಿಜಯಾ ಪಟಗಾರ್, ಕುಂದಾಪುರದ ಕೋಟೇಶ್ವರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಹೆಸರಾಂತ ರಾಜ್ಯಶಾಸ್ತ್ರ ವಿಷಯದ ಉಪನ್ಯಾಸಕರಾದ ಹರೀಶ್ ನಾಯಕ್ ಬೇಲೇಕೇರಿ, ಸುಮಾ ಶೆಟ್ಟಿ, ಕಾರ್ಯಕ್ರಮದ ಪ್ರಧಾನ ಸಂಘಟಕರಾದ ಕನ್ನಡ ಭಾರತೀ ಪ್ರಪಂಚದ ಸಂಚಾಲಕರಾದ ನಾಗನೆಲೆಯ ನಾರಾಯಣ ನಾಗು ನಾಯಕ ಹಾಗೂ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವ್ಕರ್ ಬರ್ಗಿಯವರು ಉಪಸ್ಥಿತರಿದ್ದರು.

About The Author

error: Content is protected !!