June 11, 2026

ಕುಡಿಯುವ ನೀರಿನ ಘಟಕ ದುರಸ್ತಿಗೆ ಆಗ್ರಹಿಸಿ ಕೆ.ಆರ್. ಪೇಟೆಯಲ್ಲಿ ರೈತ ಸಂಘದಿಂದ ಪ್ರತಿಭಟನೆ

ಕೃಷ್ಣರಾಜಪೇಟೆ:  ತಾಲೂಕಿನ ಗಡಿ ಗ್ರಾಮವಾದ ಆನೆಗೊಳದಲ್ಲಿ ಕಳೆದ 20 ದಿನಗಳಿಂದ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ತಕ್ಷಣವೇ ಸರಿಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತೀವ್ರ ಪ್ರತಿಭಟನೆ ನಡೆಸಲಾಯಿತು. ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

ಮದ್ಯಪಾನಿಗಳಿಗೆ ಅಡ್ಡೆಯಾದ ನೀರಿನ ಘಟಕ!

ಆನೆಗೊಳ ಗ್ರಾಮದ ಸರ್ಕಾರಿ ಆಸ್ಪತ್ರೆ ಬಳಿ ಇರುವ ಈ ಶುದ್ಧ ಕುಡಿಯುವ ನೀರಿನ ಘಟಕವು ಕೆಟ್ಟು ಹೋಗಿ ದಿನಗಳೇ ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕುರಿತು ಕರ್ನಾಟಕ ರಾಜ್ಯ ರೈತ ಸಂಘದ ಆನೆಗೊಳ ಘಟಕದ ಅಧ್ಯಕ್ಷ ಚಿಕ್ಕತರಹಳ್ಳಿ ಮಂಜೇಗೌಡ ಹಾಗೂ ಸದಸ್ಯ ಪುನೀತ್ ಮಾತನಾಡಿ, “ದಿನನಿತ್ಯ ಮಹಿಳೆಯರು, ಮಕ್ಕಳು ನೀರಿಗಾಗಿ ಈ ಘಟಕಕ್ಕೆ ಬರುತ್ತಾರೆ. ಆದರೆ, ನೀರಿನ ಘಟಕದ ಎದುರಲ್ಲೇ ಮಾಂಸಾಹಾರದ ಫಾಸ್ಟ್‌ಫುಡ್ ಹೋಟೆಲ್ ಇಟ್ಟಿರುವುದರಿಂದ, ರಾತ್ರಿಯಾಗುತ್ತಿದ್ದಂತೆ ಈ ಜಾಗವು ಮದ್ಯಪಾನಿಗಳ ಅಡ್ಡೆಯಾಗಿ ಮತ್ತು ಮೂತ್ರ ವಿಸರ್ಜನೆ ಮಾಡುವ ಜಾಗವಾಗಿ ಮಾರ್ಪಟ್ಟಿದೆ,” ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.

ರೈತರ ಪ್ರಮುಖ ಬೇಡಿಕೆಗಳು:

  • ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ತಕ್ಷಣವೇ ದುರಸ್ತಿ ಮಾಡಬೇಕು.
  • ನೀರಿನ ಘಟಕದ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು.
  • ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮತ್ತು ಮೂತ್ರ ವಿಸರ್ಜನೆ ಮಾಡದಂತೆ ಎಚ್ಚರಿಕೆ ನಾಮಫಲಕ ಅಳವಡಿಸಬೇಕು.
  • ಘಟಕದ ಪಕ್ಕದಲ್ಲೇ ಇರುವ ಹೋಟೆಲ್ ಅನ್ನು ತೆರವುಗೊಳಿಸಬೇಕು.

ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಈ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ರೈತ ಸಂಘದ ಆನೆಗೊಳ ಘಟಕದ ಅಧ್ಯಕ್ಷ ಚಿಕ್ಕತರಹಳ್ಳಿ ಮಂಜೇಗೌಡ, ಕಾರ್ಯದರ್ಶಿ ಸುಮಾ ಹರೀಶ್, ಘಟಕದ ಉಸ್ತುವಾರಿ ಆನೆಗೊಳ ಮಂಜೇಗೌಡ, ಪ್ರಮುಖ ಸದಸ್ಯರಾದ ಪುನೀತ್, ಗೋವಿಂದೇಗೌಡ್ರು, ಕಾಂತರಾಜು, ಪುರುಷೋತ್ತಮ್, ಪುಟ್ಟರಾಜು, ಕುಮಾರ್, ಸೊಂಬಣ್ಣ, ಅಂಚೇಬೀರನಹಳ್ಳಿ‌ ಮಂಜುನಾಥ್ ಹಾಗೂ ಆನೆಗೊಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ: ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

About The Author

error: Content is protected !!