July 25, 2026

ಕೆ.ಆರ್.ಪೇಟೆಯಲ್ಲಿ ಶಿವ-ಪಾರ್ವತಿಯರ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವ ಸಂಭ್ರಮ

ಕೆ.ಆರ್.ಪೇಟೆ (ಮಂಡ್ಯ): ಕೃಷ್ಣರಾಜಪೇಟೆ ಪಟ್ಟಣದಲ್ಲಿ ನೇಕಾರ ತೊಗಟವೀರ ಸಮಾಜದ ಶ್ರೀರಾಚಿ ನಂಜುಂಡಯ್ಯನವರ ವಂಶಸ್ಥರಿಂದ 26ನೇ ವರ್ಷದ ಶಿವ-ಪಾರ್ವತಿಯರ ಪಲ್ಲಕ್ಕಿ ಉತ್ಸವ ಹಾಗೂ ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವವು ಅತ್ಯಂತ ಸಡಗರ, ಸಂಭ್ರಮ ಮತ್ತು ಅದ್ದೂರಿಯಾಗಿ ನೆರವೇರಿತು.
ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀದೇವಿರಮ್ಮಣ್ಣಿ ಕೆರೆಯಲ್ಲಿ ಶಾಸ್ತ್ರಬದ್ಧವಾಗಿ ಗಂಗಾ ಪೂಜೆ ಸಲ್ಲಿಸಿ, ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ನಂತರ ಚಾಮುಂಡೇಶ್ವರಿ ಅಮ್ಮನವರ ಕರಗವನ್ನು ಬಾಲಕಿಯ ತಲೆಯ ಮೇಲೆ ಹೊರಿಸಿ, ನಡೆಮುಡಿ ಹಾಸಿ ಕೆ.ಆರ್.ಪೇಟೆ ಪಟ್ಟಣದ ಕಿಕ್ಕೇರಿ ರಸ್ತೆಯ 2ನೇ ಕ್ರಾಸ್‌ನಲ್ಲಿರುವ ಶಿವ-ಪಾರ್ವತಿಯರ ದೇವಾಲಯದ ಆವರಣಕ್ಕೆ ತರಲಾಯಿತು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಜಾನಪದ ಕಲಾತಂಡಗಳ ವೈಭವಯುತ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ವೀರಭದ್ರ ನೃತ್ಯಪಟು ನಾಗಮಂಗಲ ರುದ್ರೇಶ್ ಪ್ರಸಾದ್ ಮತ್ತು ಸಂಗಡಿಗರು ನಡೆಸಿಕೊಟ್ಟ ವೀರಗಾಸೆ ನೃತ್ಯ ಪ್ರದರ್ಶನವು ಮೆರವಣಿಗೆಗೆ ವಿಶೇಷ ಕಳೆ ತಂದಿತು. ಚೌಡೇಶ್ವರಿ ಅಮ್ಮನವರ ಕರಗವನ್ನು ಹೊತ್ತಿದ್ದ ಯುವಕ ಸ್ವಾಗತ್ ಚಂದ್ರು ಅವರು ನೀಡಿದ ‘ಅರ್ಧನಾರೀಶ್ವರಿ’ ನೃತ್ಯ ಸಾರ್ವಜನಿಕರ ಹಾಗೂ ಭಕ್ತಾದಿಗಳ ಮನ ಸೆಳೆಯಿತು.
ಉತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಪುಳಿಯೋಗರೆ ಮತ್ತು ಸಿಹಿ ಪೊಂಗಲ್ ಪ್ರಸಾದವನ್ನು ವಿತರಿಸಲಾಯಿತು. ಈ ಎಲ್ಲ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ನೇತೃತ್ವವನ್ನು ಉದ್ಯಮಿ ಕೆ.ಸಿ. ಚಂದ್ರಶೇಖರ್ ಹಾಗೂ ಸುಮತಿ ಚಂದ್ರು ದಂಪತಿ ವಹಿಸಿದ್ದರು.
ವರದಿ: ಡಾ. ಕೆ.ಆರ್. ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!