July 15, 2026

ಕೆ.ಆರ್. ಪೇಟೆ ಪಿ.ಎಲ್.ಡಿ ಬ್ಯಾಂಕ್ ನೂತನ ಉಪಾಧ್ಯಕ್ಷರಾಗಿ ಲಕ್ಷ್ಮೀಪುರ ಚಂದ್ರೇಗೌಡ ಅವಿರೋಧ ಆಯ್ಕೆ

ಕೃಷ್ಣರಾಜಪೇಟೆ: ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿ.ಎಲ್.ಡಿ) ಬ್ಯಾಂಕಿನ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲಕ್ಷ್ಮೀಪುರ ಗ್ರಾಮದ ಚಂದ್ರೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರೇಗೌಡ ಅವರನ್ನು ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ, ಅವರು ಅವಿರೋಧವಾಗಿ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಅಧಿಕೃತವಾಗಿ ಘೋಷಿಸಿದರು. ಚಂದ್ರೇಗೌಡ ಅವರ ಆಯ್ಕೆ ಪ್ರಕಟವಾಗುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.

ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಿ: ಕಿಕ್ಕೇರಿ ಸುರೇಶ್

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೆ.ಪಿ.ಸಿ.ಸಿ ಸದಸ್ಯರಾದ ಕಿಕ್ಕೇರಿ ಸುರೇಶ್ ಮಾತನಾಡಿ, “ಚಂದ್ರೇಗೌಡ ಅವರು ರೈತಪರ ಕಾಳಜಿ ಹಾಗೂ ಬ್ಯಾಂಕಿನ ಶ್ರೇಯೋಭಿವೃದ್ಧಿಯ ಬಗ್ಗೆ ಕಳಕಳಿ ಉಳ್ಳವರಾಗಿದ್ದಾರೆ. ಇಂತಹ ವ್ಯಕ್ತಿಗೆ ಉಪಾಧ್ಯಕ್ಷ ಸ್ಥಾನ ದೊರೆತಿರುವುದು ಸಂತಸದ ವಿಷಯ. ಬ್ಯಾಂಕಿನ ಶಾಖೆಗಳ ಅಭಿವೃದ್ಧಿ ಹಾಗೂ ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ ದೊರಕಿಸಿಕೊಡಲು ಅವರು ಶ್ರಮಿಸಬೇಕು” ಎಂದು ಸಲಹೆ ನೀಡಿ, ಶುಭ ಹಾರೈಸಿದರು.

ಪ್ರಾಮಾಣಿಕ ಸೇವೆಗೆ ಬದ್ಧ: ನೂತನ ಉಪಾಧ್ಯಕ್ಷ ಚಂದ್ರೇಗೌಡ

ಬಳಿಕ ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಉಪಾಧ್ಯಕ್ಷ ಚಂದ್ರೇಗೌಡ, “ನನ್ನ ಮೇಲೆ ವಿಶ್ವಾಸವಿಟ್ಟು ಅವಿರೋಧವಾಗಿ ಆಯ್ಕೆ ಮಾಡಿದ ಬ್ಯಾಂಕಿನ ಅಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರಿಗೆ ನಾನು ಆಭಾರಿಯಾಗಿದ್ದೇನೆ. ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ರೈತರ, ಸದಸ್ಯರ ಹಿತರಕ್ಷಣೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ” ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ರಾಜನಾಯಕ, ಪ್ರಮುಖ ಮುಖಂಡರಾದ ಎಲ್.ಪಿ. ದೇವರಾಜು, ಜಾನೇಗೌಡ್ರು, ಸೊಳ್ಳೇಪುರ ಜಯರಾಮು, ಏಜೇಸ್ ಪಾಷ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಿ.ಎಂ. ಮಹೇಂದ್ರ, ಪ್ರಸನ್ನ, ಸ್ವಾಮಿ, ದಿವಾಕರ್, ಮನು ಹಾಗೂ ಬ್ಯಾಂಕಿನ ನಿರ್ದೇಶಕರಾದ ರಮೇಶ್, ಸುನೀಲ್, ನಾಗರಾಜು, ಚಕ್ರಪಾಣಿ, ಸುರೇಶ್, ಜಗದೀಶ್, ರಾಮೇಗೌಡ, ಪುಟ್ಟಸ್ವಾಮಿಗೌಡ, ಮಂಜುಳಾ, ಧನಂಜಯ, ಮೋಹನ್, ಕವಿತಾ ಮತ್ತು ಕಾರ್ಯದರ್ಶಿ ಆನಂದ್, ಯೋಗೇಶ್ವರಿ, ರೂಪಾ, ನರಸಿಂಹಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

About The Author

error: Content is protected !!