September 11, 2026

ಆನಂದ್ ಆಶ್ರಮ ಕಾನ್ವೆಂಟ್ ಶಾಲೆಯಿಂದ ಶಂಶುದ್ದೀನ್ ಸರ್ಕಲ್‌ನಲ್ಲಿ ಹೆಲ್ಮೆಟ್ ಜಾಗೃತಿ ಹಾಗೂ ರಸ್ತೆ ಸುರಕ್ಷತಾ ಕಾರ್ಯಕ್ರಮ

ಭಟ್ಕಳ: ನಗರದ ಆನಂದ್ ಆಶ್ರಮ ಕಾನ್ವೆಂಟ್ ಪ್ರೌಢಶಾಲೆಯ ವತಿಯಿಂದ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಹಾಗೂ ಹೆಲ್ಮೆಟ್ ಬಳಕೆಯ ಕುರಿತು ಅರಿವು ಮೂಡಿಸುವ ಬೃಹತ್ ಜಾಗೃತಿ ಕಾರ್ಯಕ್ರಮ ಹಾಗೂ ಮೆರವಣಿಗೆಯನ್ನು ಸೆಪ್ಟೆಂಬರ್ 11, 2026ರಂದು ಶಂಶುದ್ದೀನ್ ಸರ್ಕಲ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜಾಗೃತಿ ಮೆರವಣಿಗೆ ಹಾಗೂ ಸಾಂಸ್ಕೃತಿಕ ಪ್ರದರ್ಶನ: ವಿದ್ಯಾರ್ಥಿಗಳು ಶಾಲಾ ಮೈದಾನದಿಂದ ಶಂಶುದ್ದೀನ್ ಸರ್ಕಲ್‌ವರೆಗೆ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಜಾಗೃತಿ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಶಿಸ್ತುಬದ್ಧ ಮೆರವಣಿಗೆ ನಡೆಸಿದರು. ಸರ್ಕಲ್‌ನಲ್ಲಿ ಸಾರ್ವಜನಿಕರಿಗಾಗಿ ವಿದ್ಯಾರ್ಥಿಗಳು ಹೆಲ್ಮೆಟ್ ಜಾಗೃತಿ ಗೀತೆ ಹಾಗೂ ರಸ್ತೆ ನಿಯಮಗಳ ಕುರಿತು ಪರಿಣಾಮಕಾರಿ ‘ಮೈಮ್ ಶೋ’ (ಮೂಕಾಭಿನಯ) ಪ್ರದರ್ಶಿಸಿ ಗಮನ ಸೆಳೆದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನವೀನ್ ನಾಯಕ್ ಮಾತನಾಡಿ, “ಹೆಲ್ಮೆಟ್ ಧರಿಸುವುದು ಕೇವಲ ಕಾನೂನು ಪಾಲನೆಯಲ್ಲ, ಅದು ಜೀವದ ರಕ್ಷಣೆಯ ಜವಾಬ್ದಾರಿಯಾಗಿದೆ. ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು” ಎಂದು ಕರೆ ನೀಡಿದರು. ತದನಂತರ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ರಸ್ತೆ ಸುರಕ್ಷತಾ ಪ್ರತಿಜ್ಞೆ ಸ್ವೀಕರಿಸಿದರು.

    ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಸಿಸ್ಟರ್ ಸುಶೀಲಾ, ಶಿಕ್ಷಕರು, ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. SCAF ತಂಡದ ವಿದ್ಯಾರ್ಥಿಗಳು ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಯಶಸ್ವಿ ಮೇಲುಸ್ತುವಾರಿ ವಹಿಸಿದ್ದ ಸಿ. ಸಿಲ್ವಿಯಾ ಅವರನ್ನು ಶ್ಲಾಘಿಸಲಾಯಿತು.

    About The Author

    error: Content is protected !!