ಭಟ್ಕಳ: ಪತಂಜಲಿ ಯೋಗ ಪರಿವಾರ ವತಿಯಿಂದ ರಾಜ್ಯ ಪ್ರಭಾರಿ ಅಂತರಾಷ್ಟ್ರೀಯ ಯೋಗ ಗುರು ಭವರಲಾಲ್ ಆರ್ಯ ಅವರ ಮಾರ್ಗದರ್ಶನದಲ್ಲಿ, ಯೋಗ ಗುರು ಗೋವಿಂದ್ ದೇವಡಿಗ ಅವರ ನಾಯಕತ್ವದಲ್ಲಿ ಅಡ್ವಾನ್ಸ್ ಯೋಗ ಶಿಕ್ಷಕರ 23 ದಿನಗಳ ತರಬೇತಿ ಶಿಬಿರಕ್ಕೆ ಇಂದು ಮುಂಜಾನೆ 5:30ರ ಬ್ರಾಹ್ಮಿ ಮುಹೂರ್ತದಲ್ಲಿ ಚಾಲನೆ ನೀಡಲಾಯಿತು.
ಭಟ್ಕಳದ ಮಣಕುಳಿಯ ಶ್ರೀ ನಾಗಮಸ್ತಿ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು ತುಳಸಿ ಗಿಡಕ್ಕೆ ನೀರೆಯುವ ಮೂಲಕ ಶಿಬಿರವನ್ನು ವಿದ್ಯುಕ್ತವಾಗಿ ಆರಂಭಿಸಿದರು. ಪತಂಜಲಿ ಕಿಸಾನ್ ಸಂಘಟನೆಯ ರಾಜ್ಯ ಪ್ರಭಾರಿ ಸಂಜಯ್ ಗುತ್ತೇದಾರ್ ಕಾರ್ಯಕ್ರಮ ಉದ್ಘಾಟಿಸಿ ಯೋಗಾಭ್ಯಾಸಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಿವೈಎಸ್ಪಿ ಎಂ ಗಿರೀಶ್ ಮಾತನಾಡಿ, ಯೋಗದಿಂದ ರೋಗಮುಕ್ತಿ ಸಾಧ್ಯವಾಗುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಯೋಗ ಪ್ರತಿ ವ್ಯಕ್ತಿಗೂ ಅಗತ್ಯವಾಗಿದ್ದು, ಚಿಕ್ಕವರಿಂದ ವಯೋವೃದ್ಧರ ತನಕ ಎಲ್ಲರೂ ಯೋಗವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಯೋಗದ ಕ್ಷೇತ್ರದಲ್ಲಿ ಭಾರತ ಜಗತ್ತಿಗೆ ಮಾದರಿಯಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ, ಉದ್ಯಮಿ ಹಾಗೂ ವಿದ್ಯಾಂಜಲಿ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಂಶುಪಾಲ ನಾಗೇಶ್ ಭಟ್ ಮಾತನಾಡಿ, ಯೋಗವನ್ನು ಅಳವಡಿಸಿಕೊಂಡವರು ನಿರೋಗಿಗಳಾಗಿದ್ದು, ಅದು ವ್ಯಕ್ತಿಗತ ಆರೋಗ್ಯದ ಜೊತೆಗೆ ಸಮಾಜದ ಸ್ವಾಸ್ಥ್ಯಕ್ಕೂ ಸಹಕಾರಿಯಾಗುತ್ತದೆ. ಯೋಗದ ಮಹತ್ವವನ್ನು ಜಗತ್ತಿನ ಮುಂದುವರಿದ ರಾಷ್ಟ್ರಗಳೂ ಅರಿತು ಅಳವಡಿಸಿಕೊಳ್ಳುತ್ತಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸತೀಶಕುಮಾರ್ ಯೋಗದ ಮಹತ್ವವನ್ನು ವಿವರಿಸಿದರು. ಇದೇ ವೇಳೆ ಭಟ್ಕಳದಲ್ಲಿ ಹಲವು ದಶಕಗಳಿಂದ ಯೋಗ ತರಬೇತಿಗಾಗಿ ಶ್ರಮಿಸಿದ ಹಿರಿಯ ಯೋಗಪಟು ವಿಠಲ ಬಾಳೇರಿ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಆರಂಭದಲ್ಲಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದ ಗೋವಿಂದ್ ಗುರೂಜಿ ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಶ್ರೀನಾಥ್ ಗೌಡ, ಜಿಲ್ಲಾ ಪ್ರಭಾರಿ ರಘುರಾಮ್ ಹೆಗಡೆ, ರಾಜ್ಯ ಸದಸ್ಯ ನಾಗೇಂದ್ರ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನೂರಾರು ಶಿಬಿರಾರ್ಥಿಗಳು ಪಾಲ್ಗೊಂಡು ಪ್ರಥಮ ದಿನದ ತರಬೇತಿ ಪಡೆದರು.

More Stories
*ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ನಲ್ಲಿ AITM ವಿದ್ಯಾರ್ಥಿಗಳಿಗೆ ಪ್ರಥಮ ಪ್ರಶಸ್ತಿ
ವಿದ್ಯೆಯ ಜೊತೆ ನೈತಿಕತೆ, ವಿನಯವೂ ಅಗತ್ಯ: ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
ಹವ್ಯಕ ಭವನ ಲೋಕಾರ್ಪಣೆ, ಬೆಳಕೆ ದುರ್ಗಾಪರಮೇಶ್ವರಿ ದೇವಾಲಯ ವರ್ಧಂತ್ಯುತ್ಸವ ಮೇ 1–2ರಂದು