May 24, 2026

ಎನ್‌ಎಚ್-66 ಪಾರ್ಕಿಂಗ್ ಗದ್ದಲ: ಆಟೋ-ಟ್ಯಾಕ್ಸಿ ಚಾಲಕರ ವಾಗ್ವಾದ, ತಾತ್ಕಾಲಿಕ ಪರಿಹಾರ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ-66 ಚತುಷ್ಪಥ ಕಾಮಗಾರಿಯಿಂದ ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ ತೀವ್ರಗೊಂಡಿದ್ದು, ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರ ನಡುವೆ ಗದ್ದಲ ಉಂಟಾಗಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಬಳಿಕ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ಶಾಂತಗೊAಡಿದೆ.

ಟ್ಯಾಕ್ಸಿ ಚಾಲಕರು ಬಸ್ ನಿಲ್ದಾಣದ ಹೊರಭಾಗದಲ್ಲಿ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಆಟೋ ರಿಕ್ಷಾಗಳಿಗೆ ಹಲವು ಕಡೆಗಳಲ್ಲಿ ಪಾರ್ಕಿಂಗ್ ಸೌಲಭ್ಯ ನೀಡಲಾಗಿದ್ದರೂ, ಟ್ಯಾಕ್ಸಿಗಳಿಗೆ ಮಾತ್ರ ಸೀಮಿತ ಅವಕಾಶ ಕಲ್ಪಿಸಿರುವುದರಿಂದ ಅಸಮಾಧಾನ ವ್ಯಕ್ತಪಡಿಸಿದರು.

ಭಟ್ಕಳದಲ್ಲಿ 200ಕ್ಕೂ ಹೆಚ್ಚು ಟ್ಯಾಕ್ಸಿಗಳು ಇದ್ದು, ಇಂತಹ ವ್ಯವಸ್ಥೆ ಸಾಲದು ಎಂದು ಟ್ಯಾಕ್ಸಿ ಯೂನಿಯನ್ ಸದಸ್ಯರು ಆರೋಪಿಸಿದರು. ಈ ವೇಳೆ ಪಾರ್ಕಿಂಗ್ ಹಂಚಿಕೆ ವಿಚಾರವಾಗಿ ಆಟೋ ಯೂನಿಯನ್ ಅಧ್ಯಕ್ಷ ವೆಂಕಟೇಶ್ ನಾಯ್ಕ ಹಾಗೂ ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ಗಣೇಶ್ ದೇವಾಡಿಗ ನಡುವೆ ವಾಗ್ವಾದ ನಡೆಯಿತು.

ವಿಷಯ ತಿಳಿದ ತಕ್ಷಣ ತಹಶೀಲ್ದಾರ್ ನಾಗೇಂದ್ರ ಕೂಳಶೆಟ್ಟಿ, ಡಿವೈಎಸ್‌ಪಿ ಬಿ. ಗಿರೀಶ್ ಹಾಗೂ ಸಿಪಿಐ ದಿವಾಕರ್ ಸ್ಥಳಕ್ಕೆ ಭೇಟಿ ನೀಡಿ ಎರಡೂ ಸಂಘಗಳೊAದಿಗೆ ಮಾತುಕತೆ ನಡೆಸಿದರು. ದೀರ್ಘ ಚರ್ಚೆಯ ಬಳಿಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ತಾತ್ಕಾಲಿಕ ಪಾರ್ಕಿಂಗ್ ವ್ಯವಸ್ಥೆಗೆ ಒಪ್ಪಿಗೆ ನೀಡಲಾಯಿತು.

ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ಶಾಶ್ವತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದು, ಪ್ರತಿಭಟನೆ ಹಿಂಪಡೆಯಲಾಗಿದೆ.

About The Author

error: Content is protected !!