May 24, 2026

ಮಾತೃಭೂಮಿ ವೃದ್ದಾಶ್ರಮದಲ್ಲಿ ವಯೋವೃದ್ಧನಿಗೆ ಶೇವಿಂಗ್ ಮಾಡಿ, ಕೇಶ ಮುಂಡನ ನಡೆಸಿ ಸ್ನಾನ ಮಾಡಿಸಿ ಸೇವೆ ಮಾಡಿ ಸಂಭ್ರಮಿಸಿದ ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್..

ಕೃಷ್ಣರಾಜಪೇಟೆ : ಪಟ್ಟಣದ ಹೊರವಲಯದ ಚಿಕ್ಕೋನಹಳ್ಳಿ ಬಳಿ ಇರುವ ಮಾತೃಭೂಮಿ ಉಚಿತ ವೃದ್ದಾಶ್ರಮದಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್ ದಂಪತಿಗಳು ಅನಾಥರೊಂದಿಗೆ ಸಂಭ್ರಮಿಸಿ, ಯೋಗ ಕ್ಷೇಮ ವಿಚಾರಿಸಿ ಊಟ ಬಡಿಸಿ ಸಹಪಂಕ್ತಿಯಲ್ಲಿ ಭಾಗವಹಿಸಿ ಊಟ ಮಾಡಿದರು.

ಅಪಾರವಾದ ಆಸ್ತಿ ಪಾಸ್ತಿ ಹೊಂದಿದ್ದರೂ, ತಮ್ಮ ಮಕ್ಕಳು ಹಾಗೂ ಕುಟುಂಬದ ಸದಸ್ಯರಿಗೆ ಬೇಡವಾಗಿದ್ದು, ಸಂಧ್ಯಾ ಕಾಲದಲ್ಲಿ ವೃದ್ದಾಶ್ರಮದಲ್ಲಿ ಆಶ್ರಯ ಪಡೆದಿರುವ ವಯೋ ವೃದ್ಧರೊಂದಿಗೆ ಕುಶಲೋಪರಿ ನಡೆಸಿದ ಶ್ರೀನಿವಾಸ್ ತಮ್ಮ ಮಾವನ ಮನೆ ಊಚನಹಳ್ಳಿ ತೋಟದ ಮನೆಯಲ್ಲಿ ತಮ್ಮ ಪತ್ನಿ ತಯಾರಿಸಿ ತಂದಿದ್ದ ಮೊಸರನ್ನ, ಟಮೋಟೋ ಭಾತ್ ಹಾಗೂ ಕೇಸರಿ ಭಾತ್ ಬಡಿಸಿದ ದಂಪತಿಗಳು ಅನಾಥರೊಂದಿಗೆ ತಾವೂ ಊಟ ಮಾಡಿ ಸಂಭ್ರಮಿಸಿದರು.

ಈ ಸಮಯದಲ್ಲಿ ಲಕ್ವ ರೋಗಕ್ಕೆ ತುತ್ತಾಗಿ ಕೈ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ವಯೋ ವೃದ್ಧನಿಗೆ ಶೇವಿಂಗ್ ಹಾಗೂ ಕೇಶ ಮುಂಡನ ಮಾಡಿ ಸ್ನಾನ ಮಾಡಿಸಿ, ನಿಮ್ಮೊಂದಿಗೆ ನಾವಿದ್ದೇವೆ, ಧೈರ್ಯವಾಗಿರಿ ಎಂದು ಆತ್ಮವಿಶ್ವಾಸ ತುಂಬಿದರು.. ವೃದ್ದಾಶ್ರಮದ ವ್ಯವಸ್ಥಾಪಕ ಜೈಹಿಂದ್ ನಾಗಣ್ಣ, ಸಮಾಜ ಸೇವಕರಾದ ಅರಕಲಗೂಡು ಡಾ. ಶ್ರೀನಿವಾಸ್, ಹಿರಿಯ ಆರೋಗ್ಯ ಪರಿವೀಕ್ಷಕ ಶೀಳನೆರೆ ಸತೀಶ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ನರ್ಸ್ ಗಳು ಉಪಸ್ಥಿತರಿದ್ದು ಆಶ್ರಮವಾಸಿಗಳ ಆರೋಗ್ಯ ಟಪಾಸಣೆ ನಡೆಸಿ ಆರೋಗ್ಯ ಸಲಹೆ ಮಾರ್ಗದರ್ಶನ ನೀಡಿದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!