May 23, 2026

ಮನೆ- ಮನವನ್ನು ಬೆಳಗಲು ಮನೆಗೊಂದು ಗ್ರಂಥಾಲಯ ಅವಶ್ಯ. -ಡಾ. ಮಾನಸ

ಕುಮಟಾ: ನಮಗಿಷ್ಟವಾದ ಪುಸ್ತಕಗಳು ನಮ್ಮ ಜೊತೆಗಿದ್ದರೆ ನಾವು ಬಯಸಿದ್ದೆಲ್ಲವನ್ನು ಸಾಧಿಸಬಹುದು. ಮನೆ -ಮನವನ್ನು ಬೆಳಗಲು ಪುಸ್ತಕದಿಂದ ಮಾತ್ರ ಸಾಧ್ಯ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ರವರು ಹೇಳಿದರು.

ರೋಹಿದಾಸ್ ನಾಯಕರವರ ಮನೆಯಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಸಮಾರಂಭದಲ್ಲಿ ಗ್ರಂಥಾಲಯ ನಿರ್ಮಿಸಲು ಪುಸ್ತಕ ನೀಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಪುಸ್ತಕಗಳನ್ನು ಕೊಳ್ಳುವವರಿಲ್ಲ, ಓದುವವರಿಲ್ಲ ಎಂಬ ಕೊರಗು ನಮ್ಮ ಸಾಹಿತಿಗಳಲ್ಲಿ ಮತ್ತು ಪ್ರಕಾಶಕರಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗೆ ಬಿಟ್ಟರೆ ಅದು ಎಲ್ಲಿಗೆ ಹೋಗಿ ನಿಲ್ಲಬಹುದು ಎಂಬ ಆತಂಕದಲ್ಲಿ ಈ ಸಮಸ್ಯೆಗೆ ಒಂದು ಸಕಾರಾತ್ಮಕ ಪರಿಹಾರ ಕಂಡುಕೊಳ್ಳಲು ವೈಜ್ಞಾನಿಕ ಆಶಯದ ತಳಹದಿಯ ಮೇಲೆ ಅಸ್ತಿತ್ವಕ್ಕೆ ಬಂದದ್ದೇ ಪ್ರಾಧಿಕಾರದ ಮಹತ್ವಕಾಂಕ್ಷಿ ಯೋಜನೆ ಮನೆಗೊಂದು ಗ್ರಂಥಾಲಯ. ಈ ಗ್ರಂಥಾಲಯ ಇಡೀ ಕುಟುಂಬದ ಜ್ಯೋತಿಯಾಗಿ ಮನೆ- ಮನ ಬೆಳಗಲು ಸಾಧ್ಯ ಎಂದರು. ಇದೇ ಸಂದರ್ಭದಲ್ಲಿ ವನಿತಾ ನಾಯ್ಕ, ಮಾದೇವಿ ಪಟಗಾರ, ಈಶ್ವರ ಮುಕ್ರಿ ,ಪ್ರವೀಣ್ ಮಡಿವಾಳರವರಿಗೆ ಮನೆಗೊಂದು ಗ್ರಂಥಾಲಯ ರಚಿಸಲು ಪುಸ್ತಕ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಸಂಚಾಲಕ ಕೃಷ್ಣ ನಾಯಕ ಹಿಚ್ಕಡ ಮಾತನಾಡಿ,ಬರವಣಿಗೆ ಶೈಲಿ ಬದಲಾಗಿದೆ. ಪುಸ್ತಕ ಪ್ರೀತಿ ಓದಿಸುವ ಕಾಳಜಿ ಹೆಚ್ಚಿಸಬೇಕಾದ ಅವಶ್ಯಕತೆ ನಮ್ಮೆಲ್ಲರ ಮೇಲಿದೆ. ಮನೆಗೊಂದು ಗ್ರಂಥಾಲಯದಿAದ ಇಡೀ ಸಮಾಜ ಬೆಳೆಯಲು ಸಾಧ್ಯ ಎಂದರು.

ಕಾರ್ಯಕ್ರಮ ಸಂಯೋಜಕ ರೋಹಿದಾಸ ನಾಯಕ್ ಮಾತನಾಡಿ, ಪುಸ್ತಕ ಪ್ರೇಮ ಕಡಿಮೆಯಾಗಿ ಬರೆದವರೇ ಓದಬೇಕಾದ ಪರಿಸ್ಥಿತಿ ಎದುರಾಗಿದೆ. ಗಳಗನಾಥರವರು ಪುಸ್ತಕವನ್ನು ತಲೆಯ ಮೇಲೆ ಹೊತ್ತುಕೊಂಡು ಮನೆ ಮನೆ ತಲುಪಿಸಿ ಓದಿನ ಅರಿವು ಮೂಡಿಸಿದರು ಎಂದರು.

ಮುಖ್ಯ ಅತಿಥಿ ಡಾ.ದಯಾನಂದ ಭಟ್ ಮಾತನಾಡಿ ಪುಸ್ತಕ ಸಂಸ್ಕೃತಿ ಮತ್ತು ಅದರ ಮಹತ್ವ ತುಂಬಾ ಪರಿಣಾಮಕಾರಿಯಾಗಿದ್ದು ಪುಸ್ತಕದ ಓದಿನ ಜ್ಞಾನ ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಇದೆ ಎಂದರು.

ರೋಹಿದಾಸ್ ನಾಯಕರ ಕತ್ತಲೆ ದಾರಿ ದೂರ ಕಥಾಸಂಕಲನವನ್ನು ಲೇಖಕಿ ಮಮತಾ ನಾಯ್ಕ ಪರಿಚಯಿಸಿದರು.
ವೇದಿಕೆಯಲ್ಲಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಮೋದ್ ನಾಯ್ಕ್, ರವೀಂದ್ರ ಭಟ್ ಸೂರಿ,ಸಂಚಾಲಕ ಎಸ್. ಹೆಚ್. ಗುನಗ, ಯಮುನಾ ಗಾಂವ್ಕರ್ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಶಿಕ್ಷಕ ಯೋಗೇಶ ಪಟಗಾರ ಸ್ವಾಗತಿಸಿದರೆ, ಮನೆಗೊಂದು ಗ್ರಂಥಾಲಯ ತಾಲೂಕಾ ಸಮಿತಿ ಸದಸ್ಯ ಪಿ.ಆರ್.ನಾಯ್ಕ ವಂದಿಸಿದರು.

ಇದೇ ಸಂದರ್ಭದಲ್ಲಿ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ರವರು ರವೀಂದ್ರ ಭಟ್ ಸೂರಿ, ಟಿ. ಜಿ. ಭಟ್ ಹಾಸಣಗಿ, ಎಂ.ಜಿ.ನಾಯ್ಕ,ಯೋಗೇಶ್ ಪಟಗಾರ, ಜಟ್ಟಿ ಮುಕ್ರಿ, ಬೀರಣ್ಣ ನಾಯಕ, ರೋಹಿದಾಸ ನಾಯಕ ಇವರ ಮನೆಯಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡಿ ಈ ಎಲ್ಲಾ ಗಣ್ಯರನ್ನು ಪ್ರಾಧಿಕಾರದ ಪರವಾಗಿ ಅವರ ಮನೆಯಲ್ಲಿ ಸನ್ಮಾನಿಸಿ ಗೌರವಿಸಿದರು. ಇವರ ಜೊತೆಯಲ್ಲಿ ಜಿಲ್ಲಾ ಜಾಗೃತ ಸಮಿತಿ ಸದಸ್ಯರಾದ ಕೃಷ್ಣ ನಾಯಕ ಹಿಚ್ಕಡ, ಮನಾಸುತ ಶಂಭು ಹೆಗಡೆ, ಎಸ್.ಹೆಚ್.ಗುನಗ, ಪಿ.ಆರ್.ನಾಯ್ಕ, ಯಮುನಾ ಗಾಂವ್ಕರ ಇದ್ದರು.

About The Author

error: Content is protected !!