May 23, 2026

ಕಂಟೇನರ್ ಹಿಂಬಾಲನೆ ವಿಚಾರಕ್ಕೆ ಗಲಾಟೆ: ಮೂವರ ವಿರುದ್ಧ ಪ್ರಕರಣ

ಭಟ್ಕಳ: ಕಂಟೇನರ್ ವಾಹನ ಹಿಂಬಾಲಿಸಿದ ವಿಚಾರಕ್ಕೆ ಸಂಬAಧಿಸಿ ಯುವಕರ ನಡುವೆ ಗಲಾಟೆ ನಡೆದು, ಹಲ್ಲೆ ಹಾಗೂ ಜೀವ ಬೆದರಿಕೆ ಆರೋಪದಡಿ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲಗೋಡ ಕೋಟೆಮನೆ ನಿವಾಸಿ ಹರ್ಷ ಮಂಜುನಾಥ ನಾಯ್ಕ (21) ನೀಡಿದ ದೂರಿನ ಮೇರೆಗೆ ಸುಲ್ತಾನ್ ಸ್ಟ್ರೀಟ್‌ನ ಇದ್ರಿಸ್ ಅಬ್ಬಾಸ್ ರೊಡ್ಡಾ, ಉಸ್ಮಾನ್ ಸ್ಟ್ರೀಟ್‌ನ ಅಮಾನ್ ಹಕೀಂ ಮೊತೇಶ್ಯಾಮ್ ಹಾಗೂ ಮತ್ತೋರ್ವ ಅಪರಿಚಿತ ಯುವಕ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಗುರುವಾರ ಮಧ್ಯರಾತ್ರಿ ಹರ್ಷ ಅವರು ಸ್ನೇಹಿತರಾದ ಮಧುರ ಮಂಜುನಾಥ ನಾಯ್ಕ ಮತ್ತು ಸಚಿನ್ ಗೋವಿಂದ ನಾಯ್ಕ ಅವರೊಂದಿಗೆ ಬೈಕ್‌ನಲ್ಲಿ ಸಬ್ಬತ್ತಿ ಕಡೆಯಿಂದ ಬರುತ್ತಿದ್ದರು. ರಾಘವೇಂದ್ರ ಮಠದ ಸಮೀಪದ ಮಾರೂತಿ ಸುಜುಕಿ ಶೋರೂಂ ಬಳಿ ಕಂಟೇನರ್ ವಾಹನದ ಹಿಂದೆ ಸಾಗುತ್ತಿದ್ದ ವೇಳೆ ಎರಡು ಬೈಕ್‌ಗಳಲ್ಲಿ ಬಂದ ಆರೋಪಿತರು ಅವರನ್ನು ತಡೆದಿದ್ದಾರೆ ಎನ್ನಲಾಗಿದೆ.

ಕಂಟೇನರ್ ಯಾಕೆ ಹಿಂಬಾಲಿಸುತ್ತಿದ್ದೀರಿ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿ, ಹರ್ಷ ಹಾಗೂ ಅವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಚಿನ್ ಗೋವಿಂದ ನಾಯ್ಕ ಅವರ ಶರ್ಟ್ ಹರಿದು ಹಾಕಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ನಂತರ ಪೊಲೀಸ್ ಠಾಣೆ ಎದುರಲ್ಲಿಯೂ ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

About The Author

error: Content is protected !!