May 23, 2026

ಕಡಲ ಅಲೆಗಳ ಆರ್ಭಟಕ್ಕೆ ಸಿಲುಕಿ ದೋಣಿ ಮುಳುಗಡೆ: ಮಂಕಿಯಲ್ಲಿ ಮೀನುಗಾರ ಸಾವು

ಹೊನ್ನಾವರ: ಮೀನುಗಾರಿಕೆಗೆ ತೆರಳಿದ್ದಾಗ ಸಮುದ್ರದಲ್ಲಿ ದಿಢೀರನೆ ಎದ್ದ ಭೀಕರ ಅಲೆಗೆ ಸಿಲುಕಿ ದೋಣಿ ಮುಳುಗಿ ಮೀನುಗಾರರೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಹೊನ್ನಾವರ ತಾಲೂಕಿನ ಮಂಕಿ ದೇವರಗದ್ದೆ ನಿವಾಸಿ ವೆಂಕಪ್ಪ ಓಮು ಖಾರ್ವಿ (67) ಮೃತಪಟ್ಟ ದುರ್ದೈವಿ. ಮೇ 21 ರಂದು ಸಂಜೆ 6:30 ರ ಸುಮಾರಿಗೆ ವೆಂಕಪ್ಪ ಖಾರ್ವಿ ಅವರು ಮಂಕಿ ಮಡಿಯ ಸಮೀಪದ ಅರಬ್ಬಿ ಸಮುದ್ರಕ್ಕೆ ತಮ್ಮ ‘ಶ್ರೀ ಯಕ್ಷಿ ಚೌಡೇಶ್ವರಿ’ ಹೆಸರಿನ ಸಾಂಪ್ರದಾಯಿಕ ದೋಣಿಯಲ್ಲಿ ಮೀನುಗಾರಿಕೆಗಾಗಿ ತೆರಳಿದ್ದರು. ತೀರದಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ, ರಾತ್ರಿ 7:00 ಗಂಟೆಯ ಸುಮಾರಿಗೆ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಯೊಂದು ಇವರ ದೋಣಿಗೆ ಬಲವಾಗಿ ಅಪ್ಪಳಿಸಿದೆ. ಅಲೆಯ ರಭಸಕ್ಕೆ ದೋಣಿ ಮಗುಚಿ ಬಿದ್ದಿದ್ದು, ವೆಂಕಪ್ಪ ಅವರು ಸಮುದ್ರದ ನೀರಿನಲ್ಲಿ ಮುಳುಗಿದ್ದಾರೆ. ಕಡಲಿನ ನೀರು ಕುಡಿದು ಉಸಿರುಗಟ್ಟಿ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

About The Author

error: Content is protected !!