July 15, 2026

ಮಾನವೀಯತೆ ಮೆರೆದ ಆಟೋ ಚಾಲಕರು:                     ಕಪ್ಪೆಚಿಪ್ಪು ದುರಂತ ಸಂತ್ರಸ್ತರ ಕುಟುಂಬಕ್ಕೆ ಮುರುಡೇಶ್ವರ ಆಟೋ ಸಂಘದಿಂದ ₹50 ಸಾವಿರ ಆರ್ಥಿಕ ನೆರವು

ಭಟ್ಕಳ: ಇತ್ತೀಚೆಗೆ ಕಪ್ಪೆಚಿಪ್ಪು ಸಂಗ್ರಹಿಸುವ ವೇಳೆ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟ ಸಾರದಹೊಳೆಯ 11 ಕುಟುಂಬಗಳ ಪರಿಹಾರ ನಿಧಿಗೆ ಮುರುಡೇಶ್ವರ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ (ರಿ.), ಮಾವಳ್ಳಿ–ಮುರುಡೇಶ್ವರ ವತಿಯಿಂದ ₹50,000 (ಐವತ್ತು ಸಾವಿರ ರೂ.) ನಗದು ನೆರವು ನೀಡುವ ಮೂಲಕ ಮಾನವೀಯತೆ ಮೆರೆಯಲಾಗಿದೆ.


ದುರಂತದ ನೋವಿನಲ್ಲಿರುವ ಬಡ ಕುಟುಂಬಗಳಿಗೆ ಆಸರೆಯಾಗುವ ನಿಟ್ಟಿನಲ್ಲಿ ಸಂಘದ ಎಲ್ಲಾ ಚಾಲಕರು ಮತ್ತು ಮಾಲಕರು ಸ್ವಯಂಪ್ರೇರಿತರಾಗಿ ಈ ಧನಸಹಾಯವನ್ನು ಸಂಗ್ರಹಿಸಿದ್ದರು. ಸಂಗ್ರಹಿಸಲಾದ ಮೊತ್ತದ ಚೆಕ್ ಅನ್ನು ಸಂಘದ ಪದಾಧಿಕಾರಿಗಳು ಸಾರದಹೊಳೆಯ ಶ್ರೀ ಕ್ಷೇತ್ರಕ್ಕೆ ಖುದ್ದಾಗಿ ಕೊಂಡೊಯ್ದು, ದೇವರ ಸಮ್ಮುಖದಲ್ಲಿ ಕ್ಷೇತ್ರದ ಕಾರ್ಯದರ್ಶಿಗಳಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಆಟೋ ಯೂನಿಯನ್ ಅಧ್ಯಕ್ಷರಾದ ಶ್ರೀಧರ ನಾಯ್ಕ, ಉಪಾಧ್ಯಕ್ಷ ಜಗದೀಶ ನಾಯ್ಕ, ಮಾಜಿ ಅಧ್ಯಕ್ಷ ಸತೀಶ ನಾಯ್ಕ ಹಾಗೂ ಸಂಘದ ಪ್ರಮುಖ ಸದಸ್ಯರಾದ ಅಣ್ಣಪ್ಪ ನಾಯ್ಕ, ಪ್ರಮೋದ ಸಾವಂತ, ಪಾಂಡು ನಾಯ್ಕ, ಶ್ರೀಕಾಂತ ನಾಯ್ಕ ಸೇರಿದಂತೆ ಹಲವು ಚಾಲಕರು ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.
ಕಷ್ಟದ ಕಾಲದಲ್ಲಿ ಸಂತ್ರಸ್ತ ಕುಟುಂಬಗಳ ನೆರವಿಗೆ ಧಾವಿಸಿದ ಮುರುಡೇಶ್ವರದ ಆಟೋ ಚಾಲಕರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

About The Author

error: Content is protected !!