July 15, 2026

ಗದ್ದೆಯಲ್ಲೇ ಕೃಷಿ ಪಾಠ: ಭತ್ತದ ಸಸಿ ನಾಟಿ ಮಾಡಿದ ಮುಟ್ಟಳ್ಳಿ ಶಾಲೆಯ ವಿದ್ಯಾರ್ಥಿಗಳು

ಭಟ್ಕಳ: ಕೃಷಿ ಕೇವಲ ಪುಸ್ತಕದ ಪಾಠವಲ್ಲ, ಬದುಕಿನ ಅನುಭವ ಎಂಬುದನ್ನು ಮಕ್ಕಳಿಗೆ ಮನದಟ್ಟು ಮಾಡುವ ಉದ್ದೇಶದಿಂದ ತಾಲೂಕಿನ ಮುಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶಿಷ್ಟ ಕೃಷಿ ಶಿಕ್ಷಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಲೆಯ 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳನ್ನು ನೇರವಾಗಿ ಭತ್ತದ ಗದ್ದೆಗೆ ಕರೆದೊಯ್ದು ನಾಟಿ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಪಠ್ಯದಲ್ಲಿನ ಕೃಷಿ ವಿಷಯವನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಯಿತು.


ವಿದ್ಯಾರ್ಥಿಗಳಿಗೆ ಗದ್ದೆ ಸಿದ್ಧಪಡಿಸುವ ವಿಧಾನ, ಭತ್ತದ ಸಸಿ ಬೆಳೆಸುವ ಪ್ರಕ್ರಿಯೆ, ನಾಟಿ ಮಾಡುವ ಕ್ರಮ ಹಾಗೂ ಬೇಸಾಯದ ವಿವಿಧ ಹಂತಗಳ ಕುರಿತು ರೈತರ ಮಾರ್ಗದರ್ಶನದಲ್ಲಿ ಮಾಹಿತಿ ನೀಡಲಾಯಿತು. ಬಳಿಕ ವಿದ್ಯಾರ್ಥಿಗಳು ಸ್ವತಃ ಗದ್ದೆಗಿಳಿದು ಭತ್ತದ ಸಸಿಗಳನ್ನು ನಾಟಿ ಮಾಡಿ ಕೃಷಿ ಕಾರ್ಯದ ಅನುಭವ ಪಡೆದರು. ಕೆಸರಿನಲ್ಲಿ ಕೆಲಸ ಮಾಡುವ ಹೊಸ ಅನುಭವ ಮಕ್ಕಳಲ್ಲಿ ಉತ್ಸಾಹ ಮೂಡಿಸಿದ್ದು, ರೈತರ ಶ್ರಮದ ಮಹತ್ವವನ್ನು ಹತ್ತಿರದಿಂದ ಅರಿಯುವ ಅವಕಾಶವೂ ದೊರೆಯಿತು.

ಗದ್ದೆಯಲ್ಲೇ ಸಿಕ್ಕ ಪ್ರಾಯೋಗಿಕ ಜ್ಞಾನ

“ತರಗತಿಯಲ್ಲಿ ಪಾಠ ಹೇಳುವುದಕ್ಕಿಂತ ಪ್ರಾಯೋಗಿಕವಾಗಿ ತೋರಿಸಿದರೆ ಮಕ್ಕಳು ವಿಷಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಇದೇ ಉದ್ದೇಶದಿಂದ ಸ್ಥಳೀಯರ ಸಹಕಾರದೊಂದಿಗೆ ಗದ್ದೆಯಲ್ಲಿಯೇ ಕೃಷಿ ಶಿಕ್ಷಣ ನೀಡಲಾಗಿದೆ. ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ನಾಟಿ ಕಾರ್ಯದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ.”
ವೆಂಕಟರಮಣ ನಾಯ್ಕ, ಕೃಷಿಕರು

“ಪಠ್ಯದಲ್ಲಿರುವ ಕೃಷಿ ಚಟುವಟಿಕೆಯನ್ನು ಕೇವಲ ಪುಸ್ತಕಕ್ಕೆ ಸೀಮಿತಗೊಳಿಸದೆ, ನೈಜ ಪರಿಸರದಲ್ಲಿಯೇ ಅನುಭವಿಸುವ ಅವಕಾಶ ಕಲ್ಪಿಸಲಾಗಿದೆ. ಇದರಿಂದ ರೈತರ ಪರಿಶ್ರಮದ ಮಹತ್ವವನ್ನು ಮಕ್ಕಳು ಅರಿತುಕೊಂಡಿದ್ದು, ನಾಟಿ ಮಾಡುವ ವಿಧಾನ ಸೇರಿದಂತೆ ಕೃಷಿಯ ವಿವಿಧ ಅಂಶಗಳ ಕುರಿತು ಕುತೂಹಲದಿಂದ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡರು.”
ಗಂಗಾ ಮೊಗೇರ, ಮುಖ್ಯ ಶಿಕ್ಷಕಿ

ಕಾರ್ಯಕ್ರಮದಲ್ಲಿ ಮುಟ್ಟಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರಜನಿ ನಾಯ್ಕ, ಎಸ್‌ಡಿಎಂಸಿ ಉಪಾಧ್ಯಕ್ಷೆ ಶೈಲಾ ನಾಯ್ಕ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶೇಷಗಿರಿ ನಾಯ್ಕ, ಶಿಕ್ಷಕರಾದ ಜಯಶ್ರೀ ಆಚಾರ್ಯ, ವಿಜಯಕುಮಾರ, ಲತಾ ನಾಯ್ಕ, ಎಸ್‌ಡಿಎಂಸಿ ಸದಸ್ಯರು, ಪಾಲಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

About The Author

error: Content is protected !!