July 15, 2026

ಅಕ್ರಮ ಕಸ ಸುರಿಯಲು ಬಂದ ವಾಹನ ಗ್ರಾಮಸ್ಥರ ವಶಕ್ಕೆ

ಬಸ್ತಿಮಕ್ಕಿ–ಎಡಬಡ್ರು ರಸ್ತೆ ಬದಿಯಲ್ಲಿ ಮಿತಿ ಮೀರಿದ ಸಮಸ್ಯೆ

ಬೀದಿ ದೀಪಗಳ ಕೊರತೆಯೇ ದುಷ್ಕೃತ್ಯಕ್ಕೆ ಆಸರೆ: ಗ್ರಾಮಸ್ಥರ ಆಕ್ರೋಶ


ಭಟ್ಕಳ: ಬೈಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸ್ತಿಮಕ್ಕಿ–ಎಡಬಡ್ರು ರಸ್ತೆ ಬದಿಯಲ್ಲಿ ಪದೇಪದೆ ಅಕ್ರಮವಾಗಿ ಕಸ ವಿಲೇವಾರಿ ಮಾಡುತ್ತಿರುವ ಪ್ರಕರಣ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆ ರಾತ್ರಿ ಈ ಭಾಗದಲ್ಲಿ ಕಸ ಸುರಿಯಲು ಬಂದಿದ್ದ ವಾಹನವೊಂದನ್ನು ಸ್ಥಳೀಯ ಗ್ರಾಮಸ್ಥರು ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದು, ಬಳಿಕ ಅದನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.


ರಸ್ತೆ ಬದಿಯಲ್ಲಿ ಬೇಕಾಬಿಟ್ಟಿ ಸುರಿಯಲಾಗುತ್ತಿರುವ ಕಸದಿಂದಾಗಿ ಇಡೀ ಪ್ರದೇಶದಲ್ಲಿ ದುರ್ವಾಸನೆ ಹರಡುತ್ತಿದ್ದು, ಸಾರ್ವಜನಿಕರು, ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಇಷ್ಟೇ ಅಲ್ಲದೆ, ಈ ಕಸವನ್ನು ಜಾನುವಾರುಗಳು ತಿನ್ನುತ್ತಿರುವುದರಿಂದ ಅವುಗಳ ಆರೋಗ್ಯಕ್ಕೂ ದೊಡ್ಡ ಮಟ್ಟದ ಅಪಾಯ ಎದುರಾಗಿದೆ.

    ಫಲ ನೀಡದ ಸೂಚನಾ ಫಲಕಗಳು:

    ಸ್ಥಳೀಯ ಗ್ರಾಮಸ್ಥರು ಈಗಾಗಲೇ ಹಲವು ಬಾರಿ ಸ್ವಯಂಪ್ರೇರಿತರಾಗಿ ಸೇರಿ ಇಲ್ಲಿನ ಕಸವನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಲು ಶ್ರಮಿಸಿದ್ದಾರೆ. ಆದರೆ, ರಾತ್ರಿ ವೇಳೆ ವಾಹನಗಳಲ್ಲಿ ಬಂದು ಕಸ ಸುರಿಯುವ ಕಿಡಿಗೇಡಿಗಳ ಕೃತ್ಯ ಮಾತ್ರ ನಿಂತಿಲ್ಲ. ಈ ಪ್ರದೇಶವು ಅರಣ್ಯ ಇಲಾಖೆಯ ವ್ಯಾಪ್ತಿಗೆ ಸೇರಿದ್ದು, ಅಧಿಕಾರಿಗಳ ಎಚ್ಚರಿಕೆ ಹಾಗೂ ಗ್ರಾಮ ಪಂಚಾಯಿತಿಯ ವತಿಯಿಂದ ಅಳವಡಿಸಲಾಗಿರುವ “ಇಲ್ಲಿ ಕಸ ಹಾಕಬೇಡಿ” ಎಂಬ ಸೂಚನಾ ಫಲಕಗಳಿಗೂ ಕಸ ಹಾಕುವವರು ಕ್ಯಾರೆ ಎನ್ನುತ್ತಿಲ್ಲ.

    ಕತ್ತಲೆಯೇ ದುಷ್ಕರ್ಮಿಗಳಿಗೆ ಆಸರೆ!

    “ರಸ್ತೆಯಲ್ಲಿ ವಿದ್ಯುತ್ ಕಂಬ ಹಾಗೂ ಬೀದಿ ದೀಪಗಳ ಕೊರತೆ ಇರುವುದೇ ಇಂತಹ ದುಷ್ಕರ್ಮಿಗಳಿಗೆ ವರದಾನವಾಗಿದೆ. ಕಳೆದ ಎರಡು-ಮೂರು ವರ್ಷಗಳಿಂದ ಗ್ರಾಮ ಪಂಚಾಯಿತಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಚಿವರ ಜನಸ್ಪಂದನಾ ಸಭೆಯಲ್ಲೂ ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆಗೆ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ.”
    ಸ್ಥಳೀಯ ಗ್ರಾಮಸ್ಥರು

    ಪ್ರಮುಖ ಬೇಡಿಕೆಗಳು:

    ಬಸ್ತಿಮಕ್ಕಿ–ಎಡಬಡ್ರು ರಸ್ತೆಯಲ್ಲಿ ತಕ್ಷಣವೇ ವಿದ್ಯುತ್ ಕಂಬ ಹಾಗೂ ಬೀದಿ ದೀಪಗಳನ್ನು ಅಳವಡಿಸಬೇಕು.

    ಕಸ ಸುರಿಯುವ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು.

    ರಾತ್ರಿ ಗಸ್ತು ಸೇರಿದಂತೆ ಕಟ್ಟುನಿಟ್ಟಿನ ನಿಗಾ ವ್ಯವಸ್ಥೆ ಜಾರಿಗೊಳಿಸಿ, ಅಕ್ರಮ ಕಸ ವಿಲೇವಾರಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

    ಮುರುಡೇಶ್ವರದ ಪ್ರವಾಸೋದ್ಯಮಕ್ಕೆ ಧಕ್ಕೆ: ವಿಶ್ವವಿಖ್ಯಾತ ಪ್ರವಾಸಿ ತಾಣ ಮುರುಡೇಶ್ವರದ ಅತ್ಯಂತ ಸಮೀಪದಲ್ಲೇ ಈ ರೀತಿಯ ಅಕ್ರಮ ಕಸ ವಿಲೇವಾರಿ ದಂಧೆ ನಡೆಯುತ್ತಿರುವುದು ಸ್ಥಳೀಯ ಪರಿಸರ ಹಾಗೂ ಪ್ರವಾಸೋದ್ಯಮದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಆದ್ದರಿಂದ ಜಿಲ್ಲಾಡಳಿತ ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    About The Author

    error: Content is protected !!