July 27, 2026

ಶಿರಾಲಿಯಲ್ಲಿ ಎರಡು ಬೈಕ್‌ಗಳ ನಡುವೆ ಅಪಘಾತ: ದಂಪತಿಗೆ ಗಂಭೀರ ಗಾಯ, ಪ್ರಕರಣ ದಾಖಲು

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮದ ಗುಡಿಹಿತ್ತಲ ಶ್ರೀ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗುವ ರಸ್ತೆಯ ಜಾಯಿಕಾಯಿ ಹಿತ್ತಲ್ ಕ್ರಾಸ್ ಬಳಿ ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ದಂಪತಿ ಗಾಯಗೊಂಡಿದ್ದಾರೆ.
ಶಿರಾಳಿಯ ಮೊಗೇರಕೇರಿ ನಿವಾಸಿ ರಮೇಶ್ ಮಾದೇವ ಮೊಗೇರ ನೀಡಿದ ದೂರಿನನ್ವಯ, ಗುಡಿಹಿತ್ತಲ ಗ್ರಾಮದ ನಿವಾಸಿ ಇಶಾಮ್ ಹಸನಸಾಬ್ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಮೇಶ್ ಮೊಗೇರ ಅವರು ತಮ್ಮ ಪತ್ನಿ ಮೋಹಿನಿ ರಮೇಶ್ ಮೊಗೇರ (31) ಅವರೊಂದಿಗೆ ಬೈಕ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ-66 ಕಡೆಯಿಂದ ಶ್ರೀ ಕಂಚಿನ ದುರ್ಗಾಪರಮೇಶ್ವರಿ ದೇವಸ್ಥಾನದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಗುಡಿಹಿತ್ತಲ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ-66 ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಬೈಕ್ ಚಲಾಯಿಸಿಕೊಂಡು ಬಂದ ಇಶಾಮ್ ಹಸನಸಾಬ್, ಎದುರಿನಿಂದ ಬರುತ್ತಿದ್ದ ರಮೇಶ್ ಅವರ ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ಅಪಘಾತದ ರಭಸಕ್ಕೆ ರಮೇಶ್ ಹಾಗೂ ಹಿಂಬದಿ ಸವಾರಿಯಾಗಿದ್ದ ಅವರ ಪತ್ನಿ ಮೋಹಿನಿ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

About The Author

error: Content is protected !!