July 27, 2026

ಶರಾವತಿ ಕಣಿವೆಯಲ್ಲಿ ಜಲವಿದ್ಯುತ್ ಯೋಜನೆ ಕೈಬಿಡಿ: ಸರ್ಕಾರಕ್ಕೆ ‘ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಸಮಿತಿ’ ಆಗ್ರಹ

ಪರಿಸರ ಸೂಕ್ಷ್ಮ ಶರಾವತಿ ಕಣಿವೆಯಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆಯ ಅನುಷ್ಠಾನಕ್ಕೆ ಸರ್ಕಾರದ ಆತುರ ಸರಿಯಲ್ಲ.

ಭೂಕುಸಿತ, ಜೀವವೈವಿಧ್ಯ ನಾಶ ಹಾಗೂ ರೈತರ ಜೀವನೋಪಾಯಕ್ಕೆ ಧಕ್ಕೆ ಎದುರಾಗುವ ಭೀತಿ.

ಪರಿಸರ ನಾಶದ ಬದಲು ಪರ್ಯಾಯ ಸುರಕ್ಷಿತ ಇಂಧನ ಮೂಲಗಳಿಗೆ ಆದ್ಯತೆ ನೀಡಲು ಚಂದ್ರಕಾಂತ ಕೊಚರೇಕರ ಒತ್ತಾಯ.


ಶಿವಮೊಗ್ಗ/ಸಾಗರ: ಭೂಕುಸಿತದ ಅಪಾಯ ಸೇರಿದಂತೆ ಅರಣ್ಯ, ಪರಿಸರ, ಜೀವವೈವಿಧ್ಯ ಮತ್ತು ರೈತರ ಜೀವನೋಪಾಯಕ್ಕೂ ಆತಂಕ ಎದುರಾಗಲಿದೆ ಎಂದು ತಜ್ಞರು, ವಿಜ್ಞಾನಿಗಳು ಹಾಗೂ ವಿವಿಧ ಅಧ್ಯಯನ ವರದಿಗಳು ಎಚ್ಚರಿಸಿದ್ದರೂ, ಸರ್ಕಾರ ಪರಿಸರ ಸೂಕ್ಷ್ಮ ಶರಾವತಿ ಕಣಿವೆಯಲ್ಲಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಗೊಳಿಸಲು ಆತುರ ತೋರುತ್ತಿರುವುದು ಸರಿಯಲ್ಲ ಎಂದು ‘ಶರಾವತಿ ನದಿ ಕಣಿವೆ ಉಳಿಸಿ ಹೋರಾಟ ಸಮಿತಿ’ಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪರಿಸರ ಮತ್ತು ಜನರ ಹಿತರಕ್ಷಣೆ ಮಾಡಬೇಕಾದ ಸರ್ಕಾರವೇ ಈ ರೀತಿಯ ಜನವಿರೋಧಿ ಹಾಗೂ ಪರಿಸರ ವಿರೋಧಿ ಹೆಜ್ಜೆ ಇಡುತ್ತಿರುವುದು ದುರದೃಷ್ಟಕರ ಎಂದಿದ್ದಾರೆ.

ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಕಂಟಕ: “ನಾವು ಯಾವುದೇ ಸುಸ್ಥಿರ ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ ಜನರ ಜೀವ ಮತ್ತು ಪರಿಸರ ಅತ್ಯಂತ ಅಮೂಲ್ಯವಾದದ್ದು. ಪರಿಸರ ದೃಷ್ಟಿಯಿಂದ ಅತ್ಯಂತ ಸೂಕ್ಷ್ಮವಾಗಿರುವ ಪಶ್ಚಿಮಘಟ್ಟದ ಶರಾವತಿ ಕೊಳ್ಳದ ಸಿಂಹಬಾಲದ ಸಿಂಗಳಿಕ (Lion-tailed Macaque) ಅಭಯಾರಣ್ಯದಲ್ಲಿ ಸರ್ಕಾರ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಬಲವಂತವಾಗಿ ಜನರ ಮೇಲೆ ಹೇರಲು ಹೊರಟಿರುವುದು ದುರಂತ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭೂಕುಸಿತ ಮತ್ತು ಅಪಾಯದ ಭೀತಿ: ಪ್ರಸ್ತಾವಿತ ಯೋಜನಾ ಪ್ರದೇಶವು ಅತ್ಯಂತ ನಾಜೂಕಾದ ಭೌಗೋಳಿಕ ರಚನೆಯನ್ನು ಹೊಂದಿದೆ. ಇಲ್ಲಿನ ಮೃದುಮಣ್ಣಿನ ಗುಡ್ಡ-ಪರ್ವತ ಪ್ರದೇಶದಲ್ಲಿ ಸುರಂಗಗಳನ್ನು ತೋಡುವುದು ಮತ್ತು ಸ್ಪೋಟಕಗಳನ್ನು ಬಳಸುವುದು ಭೀಕರ ಭೂಕುಸಿತದ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದ ಸ್ಥಳೀಯ ಜನರ ಜೀವನೋಪಾಯ, ಜಲಾನಯನ ಪ್ರದೇಶ ಮತ್ತು ಪರಿಸರ ಸ್ಥಿರತೆಯ ಮೇಲೆ ಸುದೀರ್ಘ ಹಾಗೂ ಗಂಭೀರ ದುಷ್ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.

ಪರ್ಯಾಯ ಇಂಧನ ಮೂಲಗಳ ಬಳಕೆ ಅಗತ್ಯ: ಪಂಪ್ಡ್ ಸ್ಟೋರೇಜ್ ಯೋಜನೆಗೆ ಬದಲಾಗಿ ಇಂದು ನಮ್ಮ ಮುಂದೆ ಸಾಕಷ್ಟು ಪರ್ಯಾಯ ಇಂಧನ ಮೂಲಗಳು ಲಭ್ಯವಿವೆ. ದೊಡ್ಡ ಮಟ್ಟದ ಬ್ಯಾಟರಿ ಸಂಗ್ರಹಣೆ, ಹೈಡ್ರೋಜನ್ ಆಧಾರಿತ ಸಂಗ್ರಹ ತಂತ್ರಜ್ಞಾನ ಹಾಗೂ ಹೊಸ ತಲೆಮಾರಿನ ನವೀನ ತಂತ್ರಜ್ಞಾನಗಳು ಹೆಚ್ಚು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿವೆ.
ಆದ್ದರಿಂದ ರಾಜ್ಯ ಸರ್ಕಾರವು ಉದ್ದೇಶಿತ ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆಯನ್ನು ತಕ್ಷಣವೇ ಕೈಬಿಟ್ಟು, ರಾಜ್ಯದ ವಿದ್ಯುತ್ ಅಗತ್ಯಗಳಿಗಾಗಿ ಇತರ ಸುರಕ್ಷಿತ ಪರ್ಯಾಯ ಇಂಧನ ಮೂಲಗಳನ್ನು ಬಳಸಿಕೊಳ್ಳಬೇಕು ಎಂದು ಚಂದ್ರಕಾಂತ ಕೊಚರೇಕರ ಅವರು ಸರ್ಕಾರವನ್ನು ಪ್ರಕಟನೆಯಲ್ಲಿ ಬಲವಾಗಿ ಆಗ್ರಹಿಸಿದ್ದಾರೆ.

    About The Author

    error: Content is protected !!