April 15, 2026

ಅಳ್ಳಂಕಿಯಲ್ಲಿ ಶ್ರೀ ವರಸಿದ್ಧಿ ಗಣಪತಿ ದೇವರ ಪುನರಾಷ್ಟಬಂಧ ಮಹೋತ್ಸವ ಏಪ್ರಿಲ್ 18-19ರಂದು


ಹೋನ್ನಾವರ ; ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಅಳ್ಳಂಕಿಯ ಶ್ರೀ ವರಸಿದ್ಧಿ ಗಣಪತಿ ದೇವರ ಪುನರಾಷ್ಟಬಂಧ ಹಾಗೂ ಪೂರ್ಣ ಕಲಾವರ್ಧಿ ತಾಂತ್ರಿಕ ಮಹೋತ್ಸವವು ಇದೇ ಬರುವ ಏಪ್ರಿಲ್ 18 ಮತ್ತು 19ರಂದು ಎರಡು ದಿನಗಳ ಕಾಲ ಆಗಮೋಕ್ತವಾಗಿ ವೈಭವದಿಂದ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ತಿಳಿಸಿದ್ದಾರೆ.


ಏಪ್ರಿಲ್ 18ರಂದು ದೇವತಾ ಪ್ರಾರ್ಥನೆಯೊಂದಿಗೆ ಬಂಧ ಶಿಥಿಲ ಪ್ರಾಯಶ್ಚಿತ್ತ ಸೇರಿದಂತೆ ಆಗಮೋಕ್ತ ವಿಧಿವಿಧಾನಗಳ ಮೂಲಕ ಪುನರಾಷ್ಟಬಂಧ ಹಾಗೂ ದಂಡಬಲಿ ಉತ್ಸವ ಜರುಗಲಿದೆ.
ಏಪ್ರಿಲ್ 19ರಂದು ಮಧ್ಯಾಹ್ನ ಶಕ್ತಿಹೋಮ, ಪೂರ್ಣ ಕಲಾವರ್ಧಿ, ಅಥರ್ವಶೀರ್ಷ ಮೋದಕ ಹವನ ಹಾಗೂ ಸಾಮೂಹಿಕ ಸತ್ಯನಾರಾಯಣ ವ್ರತ ಪೂಜೆ ನಡೆಯಲಿದ್ದು, ಬಳಿಕ ಮಹಾ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.


ಸಂಜೆ ವೇಳೆಯಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 9 ಗಂಟೆಗೆ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಜಿ.ಪಂ. ಅಧ್ಯಕ್ಷ ಆರ್.ಎಸ್. ರಾಯ್ಕರ್ ಹಾಗೂ ಗ್ರಾಮ ಸುಧಾರಣಾ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಅವರ ಉಪಸ್ಥಿತಿಯಲ್ಲಿ ಅಳ್ಳಂಕಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ, ಕವಿ ಹಾಗೂ ಸಾಹಿತಿ ಡಾ. ಜಿ.ಎಸ್. ಹೆಗಡೆ ಅವರಿಗೆ ನಾಗರಿಕ ಸನ್ಮಾನ ನೆರವೇರಿಸಲಾಗುತ್ತದೆ.


ಇದಾದ ನಂತರ ಶ್ರೀ ಮುರುಕಂಡೇಶ್ವರ ನಾಟ್ಯ ವೃಂದದಿಂದ “ಚಿನ್ನದ ಗೊಂಬೆ” ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅನ್ನಸಂತರ್ಪಣೆ ಹಾಗೂ ಮುಡಿಗಂಧ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸೇವಾ ಸಮಿತಿ ಮನವಿ ಮಾಡಿದೆ.

About The Author

error: Content is protected !!