April 15, 2026

ಭಟ್ಕಳದಲ್ಲಿ “ಚಿಣ್ಣರ ಮೇಳ – 3” ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ

ಭಟ್ಕಳ: ಹಿಂದೆ ಇಂತಹ ಶಿಬಿರಗಳು ದೂರದ ಊರುಗಳಲ್ಲಿ ನಡೆಯುತ್ತಿದ್ದರೆ, ಈಗ “ಚಿಣ್ಣರ ಮೇಳ” ಎಂಬ ಹೆಸರಿನಲ್ಲಿ ನಮ್ಮ ಊರಲ್ಲಿಯೇ ಮಕ್ಕಳ ಬೇಸಿಗೆ ಶಿಬಿರವನ್ನು ಆಯೋಜಿಸಿರುವುದು ಅಪಾರ ಸಂತೋಷ ತಂದಿದೆ ಎಂದು ಭಟ್ಕಳ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರು ಹಾಗೂ ನಿವೃತ್ತ ಯೋಧರಾದ ಶ್ರೀಕಾಂತ ನಾಯ್ಕ ಹೇಳಿದ್ದಾರೆ.

ಅವರು ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಭಟ್ಕಳ ಘಟಕವು ಏಪ್ರಿಲ್ 11ರಿಂದ 20ರವರೆಗೆ ಆಯೋಜಿಸಿರುವ “ಚಿಣ್ಣರ ಮೇಳ – 3” ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರು ಹಾಗೂ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಭಟ್ಕಳ ಘಟಕದ ಅಧ್ಯಕ್ಷರಾದ ಡಾ. ವಿರೇಂದ್ರ ವಿ. ಶಾನಭಾಗ ಅವರು, ಈ ಶಿಬಿರವು ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರುವುದರ ಜೊತೆಗೆ ನೃತ್ಯ, ನಾಟಕ, ಭಜನೆ, ಹಿರಿಯರಿಗೆ ಗೌರವ ಹಾಗೂ ಸಂಸ್ಕಾರಗಳನ್ನು ಬೆಳೆಸುವ ಉತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ನಾರಾಯಣ ದೈಮನೆ, ಗೌರವ ಮಾರ್ಗದರ್ಶಕರಾದ ಮಾನಸುತ ಶಂಭು ಹೆಗಡೆ, ಹಿರಿಯ ಮಾರ್ಗದರ್ಶಕರಾದ ವಿಷ್ಣುದಾಸ ಪೈ ಹಾಗೂ ಸಹ ಕಾರ್ಯದರ್ಶಿಗಳಾದ ಗೀತಾ ಶಿರೂರು ತಮ್ಮ ಮಾತುಗಳನ್ನು ಹಂಚಿಕೊಂಡರು.

ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ಶಿರಾಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೇತ್ರಾವತಿ ಪ್ರಾರ್ಥಿಸಿದರು, ಕಾವ್ಯಾ ಗೊಂಡ ವಂದಿಸಿದರು, ಸಂಕಲ್ಪ ಕಾರ್ಯಕ್ರಮವನ್ನು ನಿರೂಪಿಸಿದರು.

ಶಿಬಿರದಲ್ಲಿ ವಿಶ್ವನಾಥ ಮಹಾಲೆ, ರಘುರಾಮ ಮಡಿವಾಳ, ಜಗದೀಶ ಹರಿಕಾಂತ ಹಾಗೂ ದಾಮೋದರ ಗೊಂಡ ನಾಟಕ ತರಬೇತಿ ನೀಡಲಿದ್ದು, ಈಶ್ವರ ಹಕ್ರೆ ಭಜನೆ, ಯೋಗರಾಜ ಮತ್ತು ತೇಜಸ್ವಿನಿ ನೃತ್ಯ ತರಬೇತಿ ನೀಡಲಿದ್ದಾರೆ. ಉಪನ್ಯಾಸಕಿ ನಿಶ್ಚಿತಾ ಮತ್ತು ಉಪನ್ಯಾಸಕ ಗಣೇಶ ಗೊಂಡ ಶಿಬಿರದ ಉಸ್ತುವಾರಿ ವಹಿಸಲಿದ್ದಾರೆ.

About The Author

error: Content is protected !!