ಹೊನ್ನಾವರ: ತಾಲೂಕಿನ ಹಳದಿಪುರ ಗ್ರಾಮದ ಶ್ರೀ ಸಂಸ್ಥಾನ ಕೃಷ್ಣಾಶ್ರಮ ಮಠದ ಆವರಣದಲ್ಲಿ ನಡೆದ ಸಭೆಯೊಂದರಲ್ಲಿ, ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನಲಾದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಕಳೆದ ರವಿವಾರದಂದು ಹಳದೀಪುರದ ಶ್ರೀಸಂಸ್ಥಾನ ಕೃಷ್ಣಾಶ್ರಮ ಮಠದಲ್ಲಿ ಭಕ್ತರು ಹಾಗೂ ಸಾರ್ವಜನಿಕರ ಸಭೆಯೊಂದನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರವಾರದ ನಿವಾಸಿ ಅಜಿತ್ ಪೊಕಳೆ ಎಂಬುವವರು ಮಠದ ಸ್ವಾಮೀಜಿಯವರ ಮೇಲಿದ್ದ ಕೆಲವು ಹಳೆಯ ಆರೋಪಗಳ ಕುರಿತು ನೇರವಾಗಿ ಪ್ರಶ್ನೆ ಮಾಡಿದ್ದರು ಎನ್ನಲಾಗಿದೆ.
ಸಭೆಯಲ್ಲಿ ಗದ್ದಲ, ತಳ್ಳಾಟ:
ಅಜಿತ್ ಪೊಕಳೆ ಅವರು ಪ್ರಶ್ನೆ ಎತ್ತುತ್ತಿದ್ದಂತೆ ಮಠದ ಆವರಣದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಕೆರಳಿದ ಸ್ವಾಮೀಜಿಯವರ ಕೆಲವು ಶಿಷ್ಯರು ಹಾಗೂ ಬೆಂಬಲಿಗರು ಅಜಿತ್ ಪೊಕಳೆ ಅವರನ್ನು ಸಭೆಯಿಂದ ಹೊರದಬ್ಬಿ, ಅವರ ಮೇಲೆ ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ವಿಡಿಯೋ ತುಣುಕು ಪ್ರಸ್ತುತ ಸ್ಥಳೀಯ ಸಾಮಾಜಿಕ ಜಾಲತಾಣಗಳ ಗ್ರೂಪ್ಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ದೂರು ದಾಖಲಾಗಿಲ್ಲ:
ಘಟನೆ ನಡೆದು ಮೂರು ದಿನಗಳು ಕಳೆಯುತ್ತಾ ಬಂದಿದ್ದರೂ, ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಯಾವುದೇ ಅಧಿಕೃತ ದೂರು ಅಥವಾ ಪ್ರತಿ ದೂರು ದಾಖಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

More Stories
ಭಟ್ಕಳದ ಶ್ರೀ ಗುರು ವಿದ್ಯಾಧೀರಾಜ ಪಿಯು ಕಾಲೇಜಿನಲ್ಲಿ CA ಫೌಂಡೇಶನ್ ಮತ್ತು CS ಪ್ರವೇಶ ಪರೀಕ್ಷೆ ತರಬೇತಿ ಕಾರ್ಯಕ್ರಮ ಉದ್ಘಾಟನೆ
ಬಡ ಪ್ರತಿಭಾವಂತ ದಿವ್ಯಾಂಗ ವಿದ್ಯಾರ್ಥಿನಿ ಶ್ರೀರಕ್ಷಾಳ ವಿದ್ಯಾಭ್ಯಾಸ ಹಾಗೂ ಬದುಕಿಗೆ ಆಸರೆಯಾಗಿ: ಒಂದು ಮಾನವೀಯ ವಿನಂತಿ
ದಾಂಡೇಲಿ: ವಿದ್ಯುತ್ ಕ್ಷೇತ್ರ ಖಾಸಗೀಕರಣಕ್ಕೆ ತೀವ್ರ ವಿರೋಧ; ಹೆಸ್ಕಾಂ ಮೂಲಕ ಕೆಇಆರ್ಸಿಗೆ ಆಕ್ಷೇಪಣಾ ಅರ್ಜಿ ಸಲ್ಲಿಕೆ