May 28, 2026

ಬರ್ಗಿ ವಿದ್ಯಾಪೀಠದಿಂದ ವಿ.ಡಿ. ನಾಯಕ್ ಅವರಿಗೆ ಅಭಿಜಾತ ಲೋಕಮುಖಿ ಗೌರವ

ಕುಮಟಾ: ತಾಲೂಕಿನ ಬರ್ಗಿಯ ಪ್ರತಿಷ್ಠಿತ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠ ವತಿಯಿಂದ ಆಯೋಜಿಸಲಾದ ಬರ್ಗಿ ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಅಂಕೋಲಾ ಸಮೀಪದ ವಂದಿಗೆ ಗ್ರಾಮದ ನಿವಾಸಿ, ನಾಡುಮಾಸ್ಕೇರಿಯ ವಿಶ್ರಾಂತ ಅಧ್ಯಾಪಕ ಹಾಗೂ ವಿದ್ಯಾಭಿಮಾನಿ ವಿ.ಡಿ. ನಾಯಕ್ ಅವರಿಗೆ ಅಭಿಜಾತ ಲೋಕಮುಖಿ ಎಂಬ ಅಭಿದಾನದೊಂದಿಗೆ ಗೌರವಿಸಲಾಯಿತು.

ವಿಶ್ವ ನಾಡವರ ಪ್ರತಿಷ್ಠಾನದ ವಿಶ್ವಾಧ್ಯಕ್ಷ ಹಾಗೂ ಕುಂದಾಪುರ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಹರೀಶ ನಾಯಕ ಬೆಲೆಕೇರಿ ಮತ್ತು ಉಡುಪಿಯ ತಾಲೂಕು ಪಂಚಾಯತ್‌ನ ಪತ್ರಾಂಕಿತ ಲೆಕ್ಕ ಪರಿಶೋಧಕರಾದ ಸುಮಾ ಶೆಟ್ಟಿ ಅವರು ಜಂಟಿಯಾಗಿ ಸನ್ಮಾನಿಸಿದರು.

ಕಾರ್ಯಕ್ರಮದ ಪ್ರಧಾನ ಸಂಘಟಕರಾದ ಸಂಸ್ಕೃತ ಅಧ್ಯಾಪಕ ಮಂಜುನಾಥ ಗಾಂವ್ಕರ್ ಮಾತನಾಡಿ, ವಿ.ಡಿ. ನಾಯಕರ ಹಿರಿತನ, ಸಮರ್ಪಣಾ ಮನೋಭಾವ ಹಾಗೂ ಸಾರ್ವಜನಿಕ ಬದುಕಿನ ಕೊಡುಗೆಯನ್ನು ಪ್ರಶಂಸಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಿ.ಡಿ. ನಾಯಕ್ ಅವರು, ಬರ್ಗಿ ಸಂಸ್ಕೃತೋತ್ಸವದಲ್ಲಿ ನನ್ನ ಸೇವೆಯನ್ನು ಗೌರವಿಸಿರುವುದು ಜೀವನದ ಮರೆಯಲಾಗದ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದರು. ಸಂಸ್ಕೃತ ಭಾಷೆಯ ಶ್ರೀಮಂತ ಪರಂಪರೆಯನ್ನು ತಿಳಿದು ಸಂಸ್ಕಾರಯುತ ಬದುಕು ರೂಪಿಸಿಕೊಳ್ಳುವಂತೆ ಕರೆ ನೀಡಿದರು.

ನಾಗನೆಲೆಯ ಕನ್ನಡ ಭಾರತೀ ಪ್ರಪಂಚ, ಕರ್ನಾಟಕ ಸಂಸ್ಕೃತ ಪರಿಷತ್, ಕರ್ನಾಟಕ ರಣಧೀರ ವೇದಿಕೆ ಹಾಗೂ ಆನಂದ ಕವರಿ ಪ್ರತಿಷ್ಠಾನದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ತರ ಕನ್ನಡ ಜಿಲ್ಲಾ ಪಂಚಾಯತ್‌ನ ನಿಕಟಪೂರ್ವ ಸದಸ್ಯ ಪ್ರದೀಪ ನಾಯಕ ದೇವರಬಾವಿ ವಹಿಸಿದ್ದರು. ಕಾರ್ಯಕ್ರಮವನ್ನು ಕರ್ನಾಟಕ ರಣಧೀರ ವೇದಿಕೆಯ ಕುಮಟಾ ಘಟಕದ ಅಧ್ಯಕ್ಷ ಸಮೀರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಗೌಡ, ಕ್ರಿಕೆಟ್ ಕೋಚ್ ರಾಘವೇಂದ್ರ ದಿವಗಿ ಅವರ ತಂದೆ ಮೋಹನ ಭಂಡಾರಿ, ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ ನಾಯ್ಕ, ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯ ಕೋಶಾಧ್ಯಕ್ಷ ಶಿವಚಂದ್ರ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷೆ ವಿಜಯಾ ಪಟಗಾರ ಹಾಗೂ ಕನ್ನಡ ಭಾರತೀ ಪ್ರಪಂಚದ ಸಂಚಾಲಕ ನಾರಾಯಣ ನಾಗು ನಾಯಕ ಉಪಸ್ಥಿತರಿದ್ದರು.

About The Author

error: Content is protected !!