ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನೂತನವಾಗಿ ಸರ್ಕಾರಿ ಕನ್ನಡ ಪ್ರೌಢಶಾಲೆಯನ್ನು ಪ್ರಾರಂಭಿಸಲು ಮಂಜೂರಾತಿ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರು ಹಾಗೂ ಸಾಮಾಜಿಕ ಹೋರಾಟಗಾರರಾದ ಪ್ರವೀಣ ನಾಯಿಕ ಅವರು ಶಾಲಾ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದರು.
ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾದ ಎಸ್. ಎ. ಚೌಗಲಾ ಹಾಗೂ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ (SDMC) ಅಧ್ಯಕ್ಷರಾದ ರಮೇಶ ಕಾಂಬಳೆ ಅವರಿಗೆ ಅಧಿಕೃತವಾಗಿ ಮನವಿ ಪತ್ರ ಹಸ್ತಾಂತರಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಪ್ರವೀಣ ನಾಯಿಕ ಅವರು, “ಮದಭಾವಿ ಗ್ರಾಮದಲ್ಲಿ ಸಾಕಷ್ಟು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಭರಿಸಲಾಗದೆ ಅನೇಕ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಗ್ರಾಮದ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ಪ್ರೌಢ ಶಿಕ್ಷಣ ಸಿಗುವಂತಾಗಲು ಸರ್ಕಾರಿ ಪ್ರೌಢಶಾಲೆ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಶಾಲೆಯ ವತಿಯಿಂದ ಶಿಕ್ಷಣ ಅಧಿಕಾರಿಗಳಿಗೆ ಹಾಗೂ ಕ್ಷೇತ್ರದ ಶಾಸಕರಿಗೆ ತಕ್ಷಣವೇ ಅನುಮತಿ ಕೋರಿ ಪತ್ರ ಬರೆಯಬೇಕು,” ಎಂದು ಒತ್ತಾಯಿಸಿದರು.
ಶಾಲಾ ಮಂಡಳಿ ಮತ್ತು SDMC ಪೂರ್ಣ ಬೆಂಬಲ:
ಮನವಿ ಸ್ವೀಕರಿಸಿ ಮಾತನಾಡಿದ ಪ್ರಧಾನ ಗುರುಗಳಾದ ಎಸ್. ಎ. ಚೌಗಲಾ ಮತ್ತು SDMC ಅಧ್ಯಕ್ಷ ರಮೇಶ ಕಾಂಬಳೆ, “ಸಾಮಾಜಿಕ ಹೋರಾಟಗಾರರಾದ ಪ್ರವೀಣ ನಾಯಿಕ ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅತ್ಯುತ್ತಮವಾದ ಹೆಜ್ಜೆಯಿಟ್ಟಿದ್ದಾರೆ. ಇವರ ಈ ಸತ್ಕಾರ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಪ್ರಸ್ತುತ ಶಾಲಾ ಆವರಣದಲ್ಲಿ ವಿಶಾಲವಾದ ಜಾಗ ಲಭ್ಯವಿರುವುದರಿಂದ ಸರ್ಕಾರಿ ಪ್ರೌಢಶಾಲೆ ಆರಂಭಿಸಲು ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಇದು ಸುತ್ತಮುತ್ತಲಿನ ಬಡ ಮಕ್ಕಳಿಗೆ ವರದಾನವಾಗಲಿದೆ,” ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ, ಶಾಲೆಯ ವತಿಯಿಂದ ಕ್ಷೇತ್ರದ ಜನಪ್ರಿಯ ಶಾಸಕರಾದ ರಾಜು ಕಾಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ (BEO) ಎಂ. ಆರ್. ಮುಂಜೆ ಅವರಿಗೆ ನೂತನ ಪ್ರೌಢಶಾಲೆ ಮಂಜೂರಾತಿ ಕೋರಿ ಪತ್ರ ಸಿದ್ಧಪಡಿಸಲಾಯಿತು. ಈ ಪ್ರಸ್ತಾವನೆಯನ್ನು ಸಂಸ್ಥೆಯ ವತಿಯಿಂದ ಸರ್ಕಾರಕ್ಕೆ ತಲುಪಿಸಿ ಶೀಘ್ರವಾಗಿ ವರದಿ ನೀಡುವಂತೆ ಪ್ರವೀಣ ನಾಯಿಕ ಅವರಿಗೆ ಜವಾಬ್ದಾರಿ ವಹಿಸಲಾಯಿತು.
ಈ ಮಹತ್ವದ ಸಂದರ್ಭದಲ್ಲಿ ಪ್ರಮುಖರಾದ ಅನಿಲ ಭಾಮನೆ, ಶರಣಪ್ಪಾ ಶಿಂಧೆ, ಎಂ. ಶರ್ಮಾ, ಅಮೂಲ ಚವಾಣ ಸೇರಿದಂತೆ ಊರಿನ ಮುಖಂಡರು ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಮಹೇಶ್ ಶರ್ಮಾ


More Stories
ಶಿವಯೋಗಿ ನಗರದಲ್ಲಿ ಕಣ್ಣು ಮುಚ್ಚಿ ಕುಳಿತ ಹೆಸ್ಕಾಂ; ಲೈವ್ ವೈರ್ ಕಟ್ ಆಗಿದ್ದರೂ ಕರಗದ ಅಧಿಕಾರಿಗಳ ನಿರ್ಲಕ್ಷ್ಯ
ಮಾದರಿ ಹಸಿರು ಕಾರ್ಯಕ್ರಮ: ಅಥಣಿಯಲ್ಲಿ ‘ಭರವಸೆ ಬೆಳಕು ಫೌಂಡೇಶನ್’ ವತಿಯಿಂದ ಅದ್ದೂರಿ ಸಸಿ ನೆಡುವ ಅಭಿಯಾನ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕು: ಇಂದಿರಾಗಾಂಧಿ ಮೂರ್ತಿ ಸ್ಥಾಪಕ ಅಶೋಕ್ ತಳವಾರ ಅವರಿಗೆ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯಿಂದ ಸನ್ಮಾನ