July 25, 2026

NEET UG ಪರೀಕ್ಷೆ ಅಕ್ರಮ ಖಂಡಿಸಿ ಹಾಗೂ ಎನ್‌ಟಿಎ ರದ್ದತಿಗೆ ಆಗ್ರಹಿಸಿ ಹೊನ್ನಾವರದಲ್ಲಿ ಎಸ್.ಎಫ್.ಐ, ಸಿಐಟಿಯು ಪ್ರತಿಭಟನೆ: ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ

ಹೊನ್ನಾವರ (ಉತ್ತರ ಕನ್ನಡ): ದೇಶದ ರಾಜಧಾನಿ ನವದೆಹಲಿಯಲ್ಲಿ ಮತ್ತು ವಿವಿಧೆಡೆ ಶಾಂತಿಯುತವಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿ-ಯುವಜನರ ಹಕ್ಕುಗಳನ್ನು ರಕ್ಷಿಸಬೇಕು, ಬಲವಂತದ ಬಂಧನಗಳನ್ನು ತಕ್ಷಣ ಖಂಡಿಸಬೇಕು ಹಾಗೂ ನೀಟ್ ಯುಜಿ (NEET UG) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯ ಕುರಿತು ಸರಿಯಾದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (SFI), ಸಿಐಟಿಯು (CITU) ಹಾಗೂ ಚಿಂತನ ಉತ್ತರ ಕನ್ನಡ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಹೊನ್ನಾವರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಮಾನ್ಯ ತಹಸೀಲ್ದಾರರ ಮೂಲಕ ದೇಶದ ಮಾನ್ಯ ರಾಷ್ಟ್ರಪತಿಗಳಿಗೆ ಜುಲೈ 24ರಂದು ಮನವಿ ಪತ್ರ ಸಲ್ಲಿಸಲಾಯಿತು.


ಮೇ 3ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ NEET UG 2026 ಪರೀಕ್ಷೆಗೆ ದೇಶಾದ್ಯಂತ ಸುಮಾರು 22 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಆದರೆ ರಾಜಸ್ಥಾನದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಗೆ ಸಿಲುಕಿದೆ. NTA ಸಂಸ್ಥೆಯು ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ನಡೆಸಿದ ಪರಿಣಾಮವಾಗಿ ತೀವ್ರ ಮನನೊಂದ ದೇಶದ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರಂಭದಿಂದಲೂ ಪರೀಕ್ಷೆಗಳ ನಿರ್ವಹಣೆಯಲ್ಲಿ ಕುಖ್ಯಾತಿ ಪಡೆದಿರುವ ಎನ್‌ಟಿಎ, ಈ ಹಿಂದೆ 89 ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ 48 ಮರುಪರೀಕ್ಷೆಗಳನ್ನು ನಡೆಸಿ ತನ್ನ ಸಂಪೂರ್ಣ ಅಸಮರ್ಥತೆಯನ್ನು ಸಾಬೀತುಪಡಿಸಿದೆ. ಹಾಗಾಗಿ ಇಂತಹ ಅಸಮರ್ಥ ಸಂಸ್ಥೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಅಲ್ಲದೆ, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಸೋನಂ ವಾಂಗ್ಚುಕ್ ಹಾಗೂ ವಿದ್ಯಾರ್ಥಿ-ಯುವಜನ ಸಂಘಟನೆಗಳು ನಡೆಸುತ್ತಿರುವ ಶಾಂತಿಯುತ ಉಪವಾಸ ಸತ್ಯಾಗ್ರಹ ಹಾಗೂ ಹೋರಾಟವನ್ನು ಬೆಂಬಲಿಸಿದ ಪ್ರತಿಭಟನಾಕಾರರ ಮೇಲೆ ಸರ್ಕಾರ ಪೋಲಿಸ್ ಬಲಪ್ರಯೋಗ ಮಾಡುತ್ತಿರುವುದು ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲಿನ ನಾಚಿಕೆಗೇಡಿನ ದಾಳಿಯಾಗಿದೆ. ಜುಲೈ 21 ರಂದು ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ ಪಾರ್ಲಿಮೆಂಟ್ ಚಲೋ ಸಂದರ್ಭದಲ್ಲಿ ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗಿಸಿ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿರುವುದನ್ನು ಜಂಟಿ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಪ್ರಮುಖ ಬೇಡಿಕೆಗಳು:

  1. ಪರಿಹಾರ: NTA ಸಂಸ್ಥೆಯ ಕರ್ತವ್ಯಲೋಪ ಹಾಗೂ ಅಕ್ರಮದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ₹1 ಕೋಟಿ ಪರಿಹಾರ ನೀಡಬೇಕು.
  2. ಅಸಮರ್ಥ ಕೇಂದ್ರೀಕರಣ ಬಂದ್: ಕೇಂದ್ರ ಸರ್ಕಾರವು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ನಡೆಸುತ್ತಿರುವ ಅವೈಜ್ಞಾನಿಕ ಹಾಗೂ ಅಸಮರ್ಥ ಕೇಂದ್ರೀಕರಣ ಪ್ರಯತ್ನಗಳನ್ನು ತಕ್ಷಣ ನಿಲ್ಲಿಸಬೇಕು.
  3. NTA & NEET ರದ್ದು: NTA ಸಂಸ್ಥೆಯನ್ನು ರದ್ದುಗೊಳಿಸಬೇಕು ಹಾಗೂ NEET ಪರೀಕ್ಷೆಯನ್ನು ಬ್ಯಾನ್ ಮಾಡಬೇಕು.
  4. ರಾಜೀನಾಮೆ: ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು.
  5. ನ್ಯಾಯಾಂಗ ತನಿಖೆ: ನೀಟ್ ಹಗರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಲು ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು.
  6. ಸಾರ್ವಜನಿಕ ಕ್ಷಮೆ: ವಿದ್ಯಾರ್ಥಿಗಳಿಗೆ ಆದ ಅನ್ಯಾಯಕ್ಕೆ ಪ್ರಧಾನಮಂತ್ರಿಗಳು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು.
  7. NEP ರದ್ದು: ನೂತನ ಶಿಕ್ಷಣ ನೀತಿಯನ್ನು (NEP) ತಕ್ಷಣವೇ ರದ್ದುಗೊಳಿಸಬೇಕು.

ಪ್ರತಿಭಟನೆಯಲ್ಲಿ ಎಸ್.ಎಫ್.ಐ (SFI) ತಾಲೂಕು ಸಂಚಾಲನ ಸಮಿತಿ: ತಾಲೂಕು ಸಂಚಾಲಕರಾದ ಮೇಘನಾ ಗೌಡ, ಸಹಸಂಚಾಲಕರಾದ ಮಾಲಿನಿ ಅಂಬಿಗ, ನಿತೀಶ ಗೌಡ, ಜಿತೇಂದ್ರ ನಾಯ್ಕ ಹಾಗೂ ಸಫಲ್ ಶೆಟ್ಟಿ. ಸಿಐಟಿಯು (CITU) ಜಿಲ್ಲಾ ಸಮಿತಿ: ಜಿಲ್ಲಾ ಅಧ್ಯಕ್ಷರಾದ ತಿಲಕ ಗೌಡ, ಪದಾಧಿಕಾರಿಗಳಾದ ಯಮುನಾ ಗಾಂವ್ಕರ್, ತಿಮ್ಮಪ್ಪ ಗೌಡ, ಗೀತಾ ನಾಯ್ಕ, ಮಂಜುನಾಥ ಗೌಡ, ಧರ್ಮ ಗೌಡ, ಗಜಾನನ ಗೌಡ, ಸುಬ್ರಾಯ ಗೌಡ ಹಾಗೂ ಗೋವಿಂದ ಮುಕ್ರಿ. ಚಿಂತನ ಉತ್ತರ ಕನ್ನಡ ಸಂಘಟನೆ: ಕಿರಣ ಭಟ್ ಹಾಗೂ ಮಂಜುನಾಥ ಶೆಟ್ಟಿ ಭಾಗವಹಿಸಿದ್ದರು

    About The Author

    error: Content is protected !!