September 8, 2026

ಗಂಗೇನಹಳ್ಳಿ ಕೆರೆಗೆ ನೀರು ತುಂಬಿಸುವಂತೆ ಗ್ರಾಮಸ್ಥರ ಆಗ್ರಹ: ಹೇಮಾವತಿ ಇಲಾಖೆಗೆ ಮನವಿ

ಕಿಕ್ಕೇರಿ (ಮಂಡ್ಯ): ಕೃಷ್ಣರಾಜಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿಯ ಗಂಗೇನಹಳ್ಳಿ ಕೆರೆಗೆ ಕೂಡಲೇ ನೀರು ತುಂಬಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹೇಮಾವತಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹಲವು ವರ್ಷಗಳಿಂದ ಕೆರೆಗೆ ಸಮರ್ಪಕವಾಗಿ ನೀರು ಹರಿಯದ ಕಾರಣ ಸುತ್ತಮುತ್ತಲಿನ ರೈತರು, ಸಾರ್ವಜನಿಕರು ಹಾಗೂ ಜಾನುವಾರುಗಳು ಕುಡಿಯುವ ನೀರು ಮತ್ತು ಕೃಷಿಗೆ ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಕೆರೆಗೆ ನೀರು ತುಂಬಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಿ, ಕುಡಿಯುವ ನೀರಿನ ಅಭಾವ ತಪ್ಪಲಿದೆ.

ಪ್ರಸ್ತುತ ಉದ್ಯೋಗ ಖಾತರಿ ಯೋಜನೆಯಡಿ ಕೆರೆಯ ಹೂಳೆತ್ತುವ ಕೆಲಸ ನಡೆಯುತ್ತಿದ್ದು, ಇದರಿಂದ ಕೆರೆಗೆ ನೀರು ಹರಿಸಲು ವಿಳಂಬವಾಗುತ್ತಿದೆ. ಆದ್ದರಿಂದ ಉದ್ಯೋಗ ಖಾತರಿಯಡಿ ಕೂಲಿ ಕಾರ್ಮಿಕರಿಗೆ ಧಕ್ಕೆಯಾಗದಂತೆ ಹೂಳೆತ್ತುವ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಿ, ಕೆರೆ ಏರಿಯ ಜಂಗಲ್ ಕ್ಲಿಯರೆನ್ಸ್ (ಕಳೆ ತೆರವು) ಕೆಲಸವನ್ನು ನೀಡಬೇಕು ಎಂದು ಆಗ್ರಹಿಸಲಾಯಿತು.

    ಸಾರ್ವಜನಿಕರು ಹಾಗೂ ಜನ-ಜಾನುವಾರುಗಳ ಹಿತದೃಷ್ಟಿಯಿಂದ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕೆಂದು ಗ್ರಾ.ಪಂ. ಮಾಜಿ ಸದಸ್ಯರಾದ ರಘು, ರಾಜೇಶ್, ಕೃಷ್ಣಯ್ಯ ಒತ್ತಾಯಿಸಿದರು. ಸ್ಥಳದಲ್ಲಿ ಮುಖಂಡರಾದ ಚಂದ್ರ, ಶರತ್, ಧರ್ಮ, ಕುಮಾರ್, ನಂಜುಂಡ, ಗೌರಂಗ, ರಾಜಣ್ಣ, ಮಂಜಣ್ಣ, ಸಚಿನ್, ದೇವರಾಜು, ಚಂದು ಮತ್ತಿತರರು ಉಪಸ್ಥಿತರಿದ್ದರು.                     ವರದಿ : ಶಂಭು ಕಿಕ್ಕೇರಿ

    About The Author

    error: Content is protected !!