ಗೋಕರ್ಣ: ಅತಿ ಉಷ್ಣ ಹಾಗೂ ಅತಿ ಶೀತ ನೀರನ್ನು ಸೇವಿಸಬಾರದು. ದೇಹದಲ್ಲಿ ತಂಪಾಗಲಿ ಅಥವಾ ಉಷ್ಣವಾಗಲಿ ಹಂತ ಹಂತವಾಗಿ ಬದಲಾಗಬೇಕೇ ಹೊರತು, ದಿಢೀರ್ ಬದಲಾವಣೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೆಪ್ಟೆಂಬರ್ 12, 2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ನೀಡಿದರು.
ಫ್ರಿಡ್ಜ್ ನೀರು ಜೀರ್ಣಾಗ್ನಿ ನಾಶಕ: ಫ್ರಿಡ್ಜ್ನಲ್ಲಿಟ್ಟ ಅತಿ ಶೀತ ನೀರು ಕುಡಿಯುವುದು ಜೀರ್ಣಾಗ್ನಿಯನ್ನು ಹಾಳುಮಾಡುತ್ತದೆ, ವಾತ ಹಾಗೂ ಕಫ ದೋಷಗಳಿಗೆ ಕಾರಣವಾಗುತ್ತದೆ ಎಂದು ಆಯುರ್ವೇದ ಹಾಗೂ ಆಧುನಿಕ ವಿಜ್ಞಾನ ಎರಡೂ ಎಚ್ಚರಿಸಿವೆ. ನೀರನ್ನು ತಂಪಾಗಿಸಲು ಆಯುರ್ವೇದದಲ್ಲಿ ವಿವಿಧ ಹೂವುಗಳು ಹಾಗೂ ಚಿನ್ನ, ಬೆಳ್ಳಿ, ತಾಮ್ರ ಮತ್ತು ಮಣ್ಣಿನ ಪಾತ್ರೆಗಳನ್ನು ಬಳಸಲು ಸೂಚಿಸಿದ್ದು, ಸ್ಟೀಲ್ ಲೋಟಗಳು ನೀರು ಸೇವನೆಗೆ ವರ್ಜ್ಯ ಎನ್ನಲಾಗಿದೆ.
‘ನವರಾತ್ರ ನಮಸ್ಯಾ’ ಆಹ್ವಾನ ಪತ್ರಿಕೆ ಬಿಡುಗಡೆ: ಬೆಂಗಳೂರಿನ ಗಿರಿನಗರದ ಶ್ರೀಮಠದಲ್ಲಿ ಅಕ್ಟೋಬರ್ 11 ರಿಂದ 21 ರವರೆಗೆ ನಡೆಯಲಿರುವ “ನವರಾತ್ರ ನಮಸ್ಯಾ” ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗಣ್ಯರ ಭೇಟಿ ಹಾಗೂ ಆಶೀರ್ವಾದ: ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷ ಮಂಕಾಳ ವೈದ್ಯ ಕುಟುಂಬಸ್ಥರು ಮತ್ತು ಕುಮಟಾ ಶಾಸಕ ದಿನಕರ ಶೆಟ್ಟಿ ಶ್ರೀಗಳಿಂದ ಆಶೀರ್ವಾದ ಪಡೆದರು.
ಬೆಂಗಳೂರು ಉತ್ತರ ಹವ್ಯಕ ಮಂಡಲದ ಕೇಶವ ಭಟ್ ಸರ್ಪಂಗಳ ಕುಟುಂಬಸ್ಥರು ಭಿಕ್ಷಾಸೇವೆ ಸಮರ್ಪಿಸಿದ್ದು, ದಿನಪ್ರಧಾನರಾಗಿ ಶಿವರಾಮ ಭಟ್ಟ ಬುರ್ಡೆ ದಂಪತಿಗಳು ಉಪಸ್ಥಿತರಿದ್ದರು.
About The Author


More Stories
ಸುಲಭದ ದಾರಿ ಬಿಟ್ಟು ಸರಿಯಾದ ದಾರಿಯನ್ನೇ ಆರಿಸಿಕೊಳ್ಳಿ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ
ಹಣವಂತರಿಗಿಂತ ಶುದ್ಧ ನೀರು ಕುಡಿಯುವವನೇ ನಿಜವಾದ ಯೋಗವಂತ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ
ಬದಲಾಗುವ ಆಧುನಿಕ ಚಿಂತನೆಗಳಿಗಿಂತ ಭಾರತೀಯ ಪರಂಪರೆಯೇ ಸಾರ್ವಕಾಲಿಕ ಸತ್ಯ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ