September 10, 2026

ಹಣವಂತರಿಗಿಂತ ಶುದ್ಧ ನೀರು ಕುಡಿಯುವವನೇ ನಿಜವಾದ ಯೋಗವಂತ: ಗೋಕರ್ಣದಲ್ಲಿ ರಾಘವೇಶ್ವರ ಶ್ರೀ ಪ್ರತಿಪಾದನೆ

ಗೋಕರ್ಣ: ಹಣವಂತರಿಗಿಂತ ಶುದ್ಧ ನೀರು ಮತ್ತು ಗಾಳಿಯನ್ನು ಸೇವಿಸುವವನೇ ನಿಜವಾದ ಯೋಗವಂತ. ದುಡ್ಡಿಗಿಂತ ಶುದ್ಧ ನೀರು ಅಗತ್ಯ ಎಂಬುದನ್ನು ಸಮಾಜ ಆಲೋಚಿಸಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಸೆಪ್ಟೆಂಬರ್ 10, 2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ನೀಡಿದರು.

ನಗರ ವಲಸೆ ಹಾಗೂ ನೀರಿನ ಸಮಸ್ಯೆ: ಯೋಜನಾರಹಿತ ನಗರ ನಿರ್ಮಾಣದಿಂದ ನದಿ, ಕೆರೆಗಳು ಮುಚ್ಚಿ ಹೋಗಿದ್ದು, ಕಾರ್ಖಾನೆ ತ್ಯಾಜ್ಯ ಹಾಗೂ ಮಲಮೂತ್ರದ ಕಾಲುವೆಗಳಿಂದಾಗಿ ನದಿಗಳು ಮಲಿನಗೊಳ್ಳುತ್ತಿವೆ. ಯುವಜನರು ನಗರದ ವ್ಯಾಮೋಹ ಹಾಗೂ ಉದ್ಯೋಗಕ್ಕಾಗಿ ಹಳ್ಳಿ ತೊರೆಯುವ ಮನಸ್ಥಿತಿಯನ್ನು ಬದಲಾಯಿಸಿಕೊಂಡು, ನೆಮ್ಮದಿಯ ಜೀವನವಿರುವ ಹಳ್ಳಿಯ ವಾಸವನ್ನು ಆರಿಸಿಕೊಳ್ಳಬೇಕು.

ಆಯುರ್ವೇದದಲ್ಲಿ ಜಲ ಜ್ಞಾನ: ಮಳೆನೀರು ಸಿಗದಿದ್ದಾಗ ಬಳಕೆಗೆ ಯೋಗ್ಯವಾದ ಬಾವಿ, ನದಿ, ಕೆರೆ ಸೇರಿದಂತೆ ಭೂಮಿಯ ಏಳು ವಿಧದ ನೀರುಗಳ ಬಗ್ಗೆ ಸುಶ್ರುತರು ವಿವರಿಸಿದ್ದಾರೆ. ಕರಾವಳಿ-ಮಲೆನಾಡಿಗಿಂತ ಬಯಲು ಸೀಮೆಯ ಹಾಗೂ ಅರೆ ಮಲೆನಾಡಿನ ನೀರು ಸೇವನೆಗೆ ಉತ್ತಮ ಎಂದು ಆಯುರ್ವೇದ ಸೂಚಿಸಿದೆ.

ಕನ್ನಡ ವೈಶ್ಯವಾಣಿ ಸಮಾಜದಿಂದ ಸ್ವರ್ಣಪಾದುಕಾ ಪೂಜೆ: ಶ್ರೀಮಠದ ಗುರುಪರಂಪರೆಗೆ ಕನ್ನಡ ವೈಶ್ಯವಾಣಿ ಸಮಾಜದ ಬಂಧುಗಳು ಸ್ವರ್ಣಪಾದುಕಾ ಪೂಜೆ ನೆರವೇರಿಸಿದರು. ಚಂದ್ರಕಾಂತ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

    ಶುಕ್ಲ ಯಜುರ್ವೇದ ಪಾರಾಯಣ ಸಮಾಪನಗೊಂಡಿದ್ದು, ವಿದ್ವಾಂಸರು ಶ್ರೀಗಳ ಆಶೀರ್ವಾದ ಪಡೆದರು. ಕರ್ಕಿ ಜ್ಞಾನೇಶ್ವರಿ ದೈವಜ್ಞ ಮಠದ ಚಾತುರ್ಮಾಸ್ಯ ಸಮಿತಿಯ ಪ್ರಮುಖರು ಸುವಸ್ತು ಸಮರ್ಪಿಸಿದರು. ಸುಬ್ರಹ್ಮಣ್ಯ ಹೆಗಡೆ ಕಣ್ಣಿ ಕುಟುಂಬಸ್ಥರು ಗುರುಭಿಕ್ಷಾ ಸೇವೆ ಸಮರ್ಪಿಸಿದ್ದು, ದಿನಪ್ರಧಾನರಾಗಿ ಸಾದಂಗಾಯ ರಾಮಚಂದ್ರ ಭಟ್ ದಂಪತಿಗಳು ಹಾಗೂ ಡಾ.ಜಿ.ಎಲ್. ಹೆಗಡೆ, ಶ್ರೀಕಾಂತ್ ಪಂಡಿತ್, ಹೇರಂಭ ಶಾಸ್ತ್ರಿ ಉಪಸ್ಥಿತರಿದ್ದರು.

    About The Author

    error: Content is protected !!