May 23, 2026

ಟೆಲಿಗ್ರಾಂನಲ್ಲಿ ಆಧಾರ್ ಮಾಹಿತಿ ಹಂಚಿಕೆ: ಭಟ್ಕಳದ ಅಪ್ರಾಪ್ತನ ವಿರುದ್ಧ ಪೊಲೀಸ್ ಕ್ರಮ

ಭಟ್ಕಳ: ತಾಲೂಕಿನ ಕಾಲೇಜು ವಿದ್ಯಾರ್ಥಿಯೊಬ್ಬ ಅನೇಕರ ಆಧಾರ್ ಕಾರ್ಡ್ ಹಾಗೂ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಿ ಟೆಲಿಗ್ರಾಂ ಮೂಲಕ ಹಂಚಿಕೊAಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ನೇಹಿತನ ಮೊಬೈಲ್ ಸಂಖ್ಯೆಯನ್ನು ದುರುಪಯೋಗಪಡಿಸಿಕೊಂಡ ಅಪ್ರಾಪ್ತನ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಹಾವೇರಿ ಮೂಲದ 17 ವರ್ಷದ ಕಾನೂನು ಸಂಘರ್ಷಕ್ಕೆ ಒಳಗಾದ ಯುವಕ, ವಿದ್ಯಾರ್ಥಿ ಶಿರಾಲಿ ಗುಮ್ಮನಹಿತ್ತಲು ಭಾಗದಲ್ಲಿ ವಾಸವಾಗಿದ್ದಾನೆ ಎನ್ನಲಾಗಿದೆ. ಆತ ಹೆಬಳೆ ವರಕೊಡ್ಲುವಿನ ಹೊನಗದ್ದೆಯ ರಿತೀಶ್ ದೇವಿದಾಸ ನಾಯ್ಕ ಅವರೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಬಳಿಕ ಸ್ನೇಹಿತನ ಮೊಬೈಲ್ ಪಡೆದು, ಅವರ ಸಂಖ್ಯೆಯ ಆಧಾರದಲ್ಲಿ ಟೆಲಿಗ್ರಾಂ ಐಡಿ ಸೃಷ್ಟಿಸಿದ್ದಾನೆ ಎಂದು ತಿಳಿದುಬಂದಿದೆ.

ಆ ಟೆಲಿಗ್ರಾಂ ಖಾತೆ ಮೂಲಕ ವಿವಿಧ ವ್ಯಕ್ತಿಗಳ ಆಧಾರ್ ಕಾರ್ಡ್ ಹಾಗೂ ಖಾಸಗಿ ಮಾಹಿತಿಗಳನ್ನು ಹಂಚಲಾಗುತ್ತಿತ್ತು. ಜಾಲತಾಣದಲ್ಲಿ ಇಂತಹ ಮಾಹಿತಿ ಹರಿದಾಡುತ್ತಿರುವುದನ್ನು ಗಮನಿಸಿದ ಭಟ್ಕಳ ಗ್ರಾಮೀಣ ಠಾಣೆಯ ಪಿಎಸ್‌ಐ ವೆಂಕಟೇಶ ಮುರನಾಳ ತನಿಖೆ ಕೈಗೊಂಡಿದ್ದರು.
ತನಿಖೆ ವೇಳೆ ಅಪ್ರಾಪ್ತನೇ ಈ ಕೃತ್ಯದ ಹಿಂದಿರುವುದು ಬೆಳಕಿಗೆ ಬಂದಿದೆ. ಸ್ನೇಹಿತನ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ನಕಲಿ ಐಡಿ ಸೃಷ್ಟಿಸಿದ್ದ ಆತ, ವಿವಿಧ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿ ದುರುಪಯೋಗಪಡಿಸಿಕೊಂಡಿದ್ದಾನೆ ಎನ್ನಲಾಗಿದೆ.
ಆಧಾರ್ ಕಾರ್ಡ್ ಹಾಗೂ ಖಾಸಗಿ ಮಾಹಿತಿಯನ್ನು ಯಾವ ಉದ್ದೇಶಕ್ಕಾಗಿ ಹಂಚಲಾಗುತ್ತಿತ್ತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಪ್ರಕರಣ ಸಂಬAಧ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

About The Author

error: Content is protected !!