July 15, 2026

ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಆರೋಗ್ಯ ಸೇವೆ ಸಂಪೂರ್ಣ ಕುಸಿತ: ಶಾಸಕರ ವೈಫಲ್ಯಕ್ಕೆ ಮಾಜಿ ಶಾಸಕ ಸುನೀಲ ನಾಯ್ಕ ವಾಗ್ದಾಳಿ

ಭಟ್ಕಳ: “ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಅನುಭವಿ ವೈದ್ಯರ ವರ್ಗಾವಣೆಯಾದ ಬಳಿಕ ಖಾಲಿ ಇರುವ ಹುದ್ದೆಗಳಿಗೆ ಸಮರ್ಥ ವೈದ್ಯರನ್ನು ನೇಮಕ ಮಾಡಲು ಸಾಧ್ಯವಾಗದೆ ಆರೋಗ್ಯ ಸೇವೆ ಸಂಪೂರ್ಣ ಹದಗೆಟ್ಟಿದೆ. ಕ್ಷೇತ್ರದ ಬಡವರ ಆರೋಗ್ಯ ರಕ್ಷಣೆಯ ವಿಚಾರದಲ್ಲಿ ಶಾಸಕ ಮಂಕಾಳ ವೈದ್ಯ ಅವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ” ಎಂದು ಮಾಜಿ ಶಾಸಕ ಸುನೀಲ ನಾಯ್ಕ ತೀವ್ರ ಆರೋಪ ಮಾಡಿದ್ದಾರೆ. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ತುರ್ತು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ರಾಜ್ಯಕ್ಕೆ ಮಾದರಿಯಾಗಿದ್ದ ಆಸ್ಪತ್ರೆ ಇಂದು ಅಧೋಗತಿಗೆ:
“ನಮ್ಮ ಶಾಸಕತ್ವದ ಅವಧಿಯಲ್ಲಿ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಡಾ. ಲಕ್ಷ್ಮೀಶ ನಾಯ್ಕ, ಡಾ. ಸತೀಶ್ ಬಿ. ಹಾಗೂ ಡಾ. ಸವಿತಾ ಕಾಮತ್ ಸೇರಿದಂತೆ ಅತ್ಯಂತ ದಕ್ಷ ಹಾಗೂ ಅನುಭವಿ ವೈದ್ಯರ ತಂಡ ಸೇವೆ ಸಲ್ಲಿಸುತ್ತಿತ್ತು. ಇದರಿಂದಾಗಿ ನಮ್ಮ ಆಸ್ಪತ್ರೆ ಇಡೀ ರಾಜ್ಯದಲ್ಲೇ ಅತ್ಯುತ್ತಮ ಮಾದರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಖಾಸಗಿ ಆಸ್ಪತ್ರೆಗಳಿಗೂ ಮಿಗಿಲಾದ ಚಿಕಿತ್ಸೆ ಇಲ್ಲಿ ದೊರೆಯುತ್ತಿದ್ದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದರು” ಎಂದು ಸುನೀಲ ನಾಯ್ಕ ಸ್ಮರಿಸಿದರು.

“ಆದರೆ ಇಂದು ಪರಿಸ್ಥಿತಿ ತಲೆಕೆಳಗಾಗಿದೆ. ವರ್ಗಾವಣೆ ಎಂಬುದು ಸರ್ಕಾರದ ಸಾಮಾನ್ಯ ಪ್ರಕ್ರಿಯೆಯಾಗಿದ್ದರೂ, ಕ್ಷೇತ್ರದ ಜನಪ್ರತಿನಿಧಿಗಳು ಸಮರ್ಥ ವೈದ್ಯರನ್ನು ಇಲ್ಲಿಯೇ ಉಳಿಸಿಕೊಳ್ಳಲು ಅಥವಾ ಅವರ ಜಾಗಕ್ಕೆ ತಕ್ಷಣವೇ ಬೇರೆ ದಕ್ಷ ವೈದ್ಯರನ್ನು ನೇಮಕ ಮಾಡಲು ಸರ್ಕಾರದ ಮೇಲೆ ಒತ್ತಡ ತರಬೇಕಿತ್ತು. ಪ್ರಸ್ತುತ ಶಾಸಕರ ಇಚ್ಛಾಶಕ್ತಿಯ ಕೊರತೆಯಿಂದಾಗಿ ಆಸ್ಪತ್ರೆಯ ಮೇಲಿನ ಸಾರ್ವಜನಿಕರ ವಿಶ್ವಾಸ ದಿನದಿಂದ ದಿನಕ್ಕೆ ಕುಗ್ಗುತ್ತಿದೆ” ಎಂದು ಅವರು ಟೀಕಿಸಿದರು.

ಮೂಲಸೌಕರ್ಯದ ಕೊರತೆ – ರೋಗಿಗಳ ಸಂಕಷ್ಟ:
ಆಸ್ಪತ್ರೆಯ ಸದ್ಯದ ದುಸ್ಥಿತಿಯನ್ನು ಬಿಚ್ಚಿಟ್ಟ ಮಾಜಿ ಶಾಸಕರು, “ಆಸ್ಪತ್ರೆಯ ಸುಂದರ ಕಟ್ಟಡದಲ್ಲಿ ಈಗ ಸಮಸ್ಯೆಗಳು ತಲೆದೋರಿದ್ದು, ಮಳೆ ಬಂದಾಗ ನೀರು ಸೋರುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಮಧ್ಯಾಹ್ನ 3 ಗಂಟೆಯ ಬಳಿಕ ಆಸ್ಪತ್ರೆಯಲ್ಲಿ ವೈದ್ಯರ ಲಭ್ಯತೆ ತೀರಾ ಕಡಿಮೆಯಾಗುತ್ತಿದೆ. ಇದರಿಂದಾಗಿ ರಾತ್ರಿ ವೇಳೆಯಲ್ಲಿ ತುರ್ತು ಚಿಕಿತ್ಸೆಗಾಗಿ ಬರುವ ಬಡ ರೋಗಿಗಳು ತೀವ್ರ ಸಂಕಷ್ಟ ಎದುರಿಸುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಕೇವಲ ಭಟ್ಕಳ ಮಾತ್ರವಲ್ಲದೆ ಮುರ್ಡೇಶ್ವರ ಹಾಗೂ ಮಂಕಿ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ವೈದ್ಯರ ಕೊರತೆ ತೀವ್ರವಾಗಿದೆ. ತಾಲೂಕು ಆರೋಗ್ಯಾಧಿಕಾರಿ (ಟಿಎಚ್‌ಒ) ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನು ಡಾ. ಅರುಣ ಅವರಿಗೆ ನೀಡಿರುವುದರಿಂದ, ಅವರ ನಿಯಮಿತ ವೈದ್ಯಕೀಯ ಸೇವೆಯ ಮೇಲೂ ಪರಿಣಾಮ ಉಂಟಾಗಿದೆ. ಬಡವರ ಆಶಾಕಿರಣವಾಗಿದ್ದ ಆಸ್ಪತ್ರೆ ಇಂದು ವ್ಯವಸ್ಥೆಯ ನಿರ್ಲಕ್ಷ್ಯದಿಂದ ಸೊರಗುತ್ತಿದ್ದು, ಸರ್ಕಾರ ತಕ್ಷಣವೇ ಇಲ್ಲಿಗೆ ಸಮರ್ಥ ವೈದ್ಯರನ್ನು ನೇಮಿಸಬೇಕು” ಎಂದು ಅವರು ಆಗ್ರಹಿಸಿದರು.

24 ಗಂಟೆಯೂ ಸಿಗುತ್ತಿದ್ದ ಸೇವೆ ಇಂದು ಮಾಯ:
ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮಾತನಾಡಿ, “ಸುನೀಲ ನಾಯ್ಕ ಅವರು ಶಾಸಕರಾಗಿದ್ದ ಅವಧಿಯಲ್ಲಿ ಸಾರ್ವಜನಿಕರಿಗೆ 24 ಗಂಟೆಯೂ ಉತ್ತಮ ಆರೋಗ್ಯ ಸೇವೆ ಯಾವುದೇ ಅಡೆತಡೆಯಿಲ್ಲದೆ ದೊರೆಯುತ್ತಿತ್ತು. ಆದರೆ ಇಂದು ಆಸ್ಪತ್ರೆಯ ಆಡಳಿತ ಹಳಿ ತಪ್ಪಿರುವುದು ಅತ್ಯಂತ ವಿಷಾದನೀಯ” ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಾಯ ದೇವಾಡಿಗ, ಪ್ರಮೋದ ಜೋಶಿ, ಕೆ.ಕೆ. ಮೋಹನ, ರಾಜೇಶ ನಾಯ್ಕ, ಯಶೋಧರ ನಾಯ್ಕ, ವಿಜಯ ನಾಯ್ಕ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

About The Author

error: Content is protected !!