July 17, 2026

ವಿಶೇಷ ಚೇತನ ಮಕ್ಕಳ ಶಾಲೆ ಬಳಿ ನೂತನ ಬಸ್ ನಿಲುಗಡೆಗೆ ಅಧಿಕೃತ ಚಾಲನೆ

ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕುದುರೆ ತೋಟದ ಸಮೀಪವಿರುವ ಶ್ರೀ ಶಾರದಾ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಹತ್ತಿರ, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಪಾಲಕರ ಅನುಕೂಲಕ್ಕಾಗಿ ನೂತನ ಬಸ್ ನಿಲುಗಡೆಗೆ (ಬಸ್ ಸ್ಟಾಪ್) ಬೋರ್ಡ್ ಅಳವಡಿಸುವ ಮೂಲಕ ಅಧಿಕೃತ ಚಾಲನೆ ನೀಡಲಾಗಿದೆ.
ವಿಶೇಷ ಚೇತನ ಮಕ್ಕಳ ಸುರಕ್ಷಿತ ಪ್ರಯಾಣ ಹಾಗೂ ಸಾರಿಗೆ ಸೌಕರ್ಯಕ್ಕಾಗಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯು ಕಾಗವಾಡ ಶಾಸಕರು ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಅಧ್ಯಕ್ಷರಾದ ರಾಜು ಕಾಗೆ ಮತ್ತು ಸ್ಥಳೀಯ ಬಸ್ ಡಿಪೋ ಮ್ಯಾನೇಜರ್ ಅವರಿಗೆ ಮನವಿ ಸಲ್ಲಿಸಿತ್ತು. ಸಂಸ್ಥೆಯ ಕೋರಿಕೆಗೆ ತಕ್ಷಣ ಸ್ಪಂದಿಸಿದ ಶಾಸಕರು, ತಕ್ಷಣವೇ ಬಸ್ ನಿಲುಗಡೆಗೆ ಆದೇಶ ಹೊರಡಿಸಿದ್ದರು. ಶಾಸಕರ ಆದೇಶವನ್ನು ಜಾರಿಗೆ ತಂದು ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಸ್ಥಳೀಯ ಬಸ್ ಡಿಪೋ ಮ್ಯಾನೇಜರ್ ಅವರು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿ ಪೂರ್ಣ ಸಹಕಾರ ನೀಡಿದ್ದಾರೆ.

ಗಣ್ಯರ ಜಂಟಿ ಶ್ಲಾಘನೆ:

ಪ್ರವೀಣ ನಾಯಿಕ (ಸಾಮಾಜಿಕ ಹೋರಾಟಗಾರರು ಹಾಗೂ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖಂಡರು):
“ವಿಶೇಷ ಚೇತನ ಮಕ್ಕಳ ಸುರಕ್ಷಿತ ಪ್ರಯಾಣಕ್ಕೆ ಈ ಬಸ್ ನಿಲುಗಡೆ ಅತ್ಯಗತ್ಯವಾಗಿತ್ತು. ನಮ್ಮ ಸಂಸ್ಥೆಯ ಮನವಿಯನ್ನು ಪುರಸ್ಕರಿಸಿ ಆದೇಶ ನೀಡಿದ ಶಾಸಕ ರಾಜು ಕಾಗೆ ಅವರಿಗೆ ಹಾಗೂ ತಕ್ಷಣವೇ ಕಾರ್ಯಪ್ರವೃತ್ತರಾಗಿ ಸಹಕರಿಸಿದ ಡಿಪೋ ಮ್ಯಾನೇಜರ್ ಅವರಿಗೆ ಸಮಸ್ತ ಸಾರ್ವಜನಿಕರ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.”

ಶಾಂತಾ ಶಿಂಧೆ (ಶ್ರೀ ಶಾರದಾ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಸಂಸ್ಥಾಪಕರು):
“ಇಲ್ಲಿನ ಮಕ್ಕಳು ಮತ್ತು ಪಾಲಕರು ಪ್ರತಿದಿನ ಅನುಭವಿಸುತ್ತಿದ್ದ ಸಾರಿಗೆ ಸಮಸ್ಯೆಯನ್ನು ಮನಗಂಡು ಬಸ್ ನಿಲುಗಡೆ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ. ಶಾಲೆಯ ಮಕ್ಕಳ ಹಿತದೃಷ್ಟಿಯಿಂದ ಶ್ರಮಿಸಿದ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಪದಾಧಿಕಾರಿಗಳಿಗೆ ಹಾಗೂ ಸಹಕರಿಸಿದ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಶಾಲೆಯ ಪರವಾಗಿ ಧನ್ಯವಾದಗಳು.”

ಈ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಮುಖಂಡರಾದ ಪ್ರವೀಣ್ ನಾಯಕ್, ಮಹೇಶ್ ಶರ್ಮಾ, ಅನಿಲ್ ಶರಣಪ್ಪ ಹಾಗೂ ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಎಸ್. ಕೆ. ಜಾದವ್, ಶ್ರೀ ವಿ. ವಿ. ಝೆಂಡೆ, ಶ್ರೀ ಎಂ. ಜೆ. ಚೌಹಾಣ್, ಶ್ರೀ ಎಂ. ಎಂ. ದೇವಮಾನೆ, ಶ್ರೀ ಜಿ. ಗಾಯಕವಾಡ, ಎಂ. ಜೆ. ಕಾಂಬಳೆ, ಎ. ಎಸ್. ಕಾಂಬಳೆ, ಜೆ. ಪಿ. ರಾಠೋಡ್, ಎಸ್. ಪಾಟೀಲ್, ಜಾದವ್, ಭಂಡಾರಿ, ಮಾಳಿ, ಮಾನಸ ಅಕ್ಕಾ, ಮುಲ್ಲಾ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ, ಸಾರಿಗೆ ಸಂಸ್ಥೆಯ ಸಿಬ್ಬಂದಿ, ಪಾಲಕರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ವರದಿ : ಮಹೇಶ ಶರ್ಮ

About The Author

error: Content is protected !!