March 2, 2026

ಮುರ್ಡೇಶ್ವರ ದೇವಾಲಯದಲ್ಲಿ ಭಕ್ತರ ಕುಟುಂಬದ ಚಿನ್ನಾಭರಣ ಕಳ್ಳತನ

36 ಗ್ರಾಂ ಬಂಗಾರದ ಚೈನ್ ನಾಪತ್ತೆ; ರೂ.1.69 ಲಕ್ಷ ಮೌಲ್ಯ

ಭಟ್ಕಳ: ಮುರಡೇಶ್ವರ ದೇವಸ್ಥಾನದಲ್ಲಿ ಭಕ್ತರೊಬ್ಬರ ಕುಟುಂಬದ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.


ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಚಾಲಾಡ್ ನಿವಾಸಿ ಜೈಯಂತ ಎ.ವಿ. ವೇಣುಗೋಪಾಲ (42) ಅವರು ದೂರು ಸಲ್ಲಿಸಿದ್ದು, ತಮ್ಮ ಹೆಂಡತಿ, ಮಕ್ಕಳು, ತಂದೆ-ತಾಯಿ ಹಾಗೂ ಸಂಬಂಧಿಕರೊಂದಿಗೆ ದೇವಾಲಯಕ್ಕೆ ದರ್ಶನಕ್ಕೆ ಆಗಮಿಸಿದ್ದರು. ದೇವರ ದರ್ಶನಕ್ಕಾಗಿ ಸರದಿ ಸಾಲಿನಲ್ಲಿ ನಿಂತಿದ್ದ ವೇಳೆ, ಅಪರಿಚಿತ ಕಳ್ಳರು ಅವರ ತಾಯಿಗೆ ತಿಳಿಯದಂತೆ ಕೈಚಳಕ ತೋರಿಸಿ, ಅವರ ಬಳಿಯಿದ್ದ ವ್ಯಾನಿಟಿ ಬ್ಯಾಗಿನ ಜಿಪ್ ತೆರೆಯಿಸಿ ಅದರೊಳಗಿದ್ದ ತಂದೆಗೆ ಸೇರಿದ ಸುಮಾರು 36 ಗ್ರಾಂ ತೂಕದ ಬಂಗಾರದ ಚೈನ್ ಅನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಕಳವಾದ ಚಿನ್ನಾಭರಣದ ಅಂದಾಜು ಮೌಲ್ಯ ರೂ. 1,69,000/- ಎಂದು ತಿಳಿಸಲಾಗಿದೆ. ಕಳವಾದ ಚೈನ್ ಹಾಗೂ ಕಳ್ಳರನ್ನು ಪತ್ತೆಹಚ್ಚುವಂತೆ ದೂರುದಾರರು ಪೊಲೀಸರನ್ನು ವಿನಂತಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

About The Author

error: Content is protected !!