ಕುಮಟಾ : ಇಲ್ಲಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್ ) ಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ಅತ್ಯುನ್ನತವಾದ ಅಂಕಗಳನ್ನು ಪಡೆದು ರ್ಯಾಂಕ್ ವಿಜೇತರಾದ ಆರು ವಿದ್ಯಾರ್ಥಿಗಳಿಗೆ ಅವರ ಪಾಲಕರೊಂದಿಗೆ ಗೌರವಿಸಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿದ ಶಾಲಾ ಶಿಕ್ಷಣ ಇಲಾಖೆಯ ಧಾರವಾಡದ ಆಯುಕ್ತಾಲಯದ ಸವ್ಯಸಾಚಿ ಜನಪ್ರಿಯ ನಿರ್ದೇಶಕರಾದ ಈಶ್ವರ ನಾಯ್ಕರವರು ಮಾತನಾಡಿ, ಉತ್ತರ ಕನ್ನಡವು ಹಿಂದಿನಿAದಲೂ ಶೈಕ್ಷಣಿಕವಾಗಿ ಮುತ್ತು ಬೌದ್ಧಿಕವಾಗಿ ನಾಡಿನ ಗಮನವನ್ನು ಸೆಳೆದ ಜಿಲ್ಲೆಯಾಗಿದ್ದು, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ನಿರಂತರವಾಗಿ ಮಂಚೂಣಿಯ ಸಾಧನೆಯನ್ನು ಮಾಡುತ್ತಲೇ ಬಂದಿರುವ ಸರಣಿಯಲ್ಲಿ ಪ್ರಸಕ್ತ ವರ್ಷವೂ ಜಯಭೇರಿಯನ್ನು ಸಾಧಿಸುವ ಮೂಲಕ ತನ್ನ ಗಟ್ಟಿತನವನ್ನು ಕಾದುಕೊಂಡಿರುವುದು ಅಭಿಮಾನದ ವಿಷಯವೆಂದು, ಕುಮಟಾದ ಡಯಟ್ ನ ಪ್ರಾಚಾರ್ಯರು ಮತ್ತು ಉಪನ್ಯಾಸ ವೃಂದ ಯಾರ ಪ್ರಾಯೋಜಕತ್ವವನ್ನು ಪಡೆಯದೇ, ತಾವೇ ಮೊದಲಾಗಿ ಗೌರವಾರ್ಪಣೆಯ ಸಮಾರಂಭವನ್ನು ಆಯೋಜಿಸುವ ಮೂಲಕ ಬದ್ಧತೆಯನ್ನು ಮೆರೆದು ಇತರರಿಗೆ ಮಾದರಿಯಾಗಿರುವ ಬಗ್ಗೆ ಶ್ಲಾಘಿಸಿದರು.

ಸಭಾಧ್ಯಕ್ಷತೆಯನ್ನು ವಹಿಸಿದ್ದ ದಯಟ್ ಪ್ರಾಚಾರ್ಯರು ಹಾಗೂ ಅಭಿವೃದ್ಧಿಯ ಉಪ ನಿರ್ದೇಶಕರಾದ ಎನ್ ಆರ್ ಹೆಗಡೆಯವರು ಸಾಧಕ ವಿದ್ಯಾರ್ಥಿಗಳು ನಮ್ಮ ಹೆಮ್ಮೆಯಾಗಿದ್ದು, ಅವರ ಸಾಧನೆಗೆ ಹಗಲಿರುಳು ಶ್ರಮಿಸಿದ ಅಧ್ಯಾಪಕ ವೃಂದ ಹಾಗೂ ಮಾರ್ಗದರ್ಶನವನ್ನು ನೀಡಿದ ತನ್ನೆಲ್ಲ ಸಹೋದ್ಯೋಗಿಗಳಿಂದ ಅಭಿನಂದನಾರ್ಹರು ಎಂದರು.
ಸನ್ಮಾನವನ್ನು ಸ್ವೀಕರಿಸಿದ ವೈಭವಿ ದೇವಾನಂದ ನಾಯಕರವರು ಮಾತನಾಡಿ, ತಾನು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ತನಗಿಂತ ತನ್ನ ಶಾಲೆಯ ಮುಖ್ಯಾಧ್ಯಾಪಕರ ದೇವರಲ್ಲಿನ ನಿತ್ಯ ಪ್ರಾರ್ಥನೆ ಹಾಗೂ ಶಿಕ್ಷಕರ ಪರಿಶ್ರಮ ಮತ್ತು ಹಾರೈಕೆಯೇ ಕಾರಣವೆಂದು ಭಾವುಕರಾಗಿ ನುಡಿದರು.
ಡಯಟಿನ ಉಪ ಪ್ರಾಚಾರ್ಯರಾದ ಜಿ ಎಸ್ ಭಟ್ ರವರು ಸ್ವಾಗತಿಸಿದರು. ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿಗಳಾದ ಹಿರಿಯ ಉಪನ್ಯಾಸಕಿ ಭಾರತಿ ನಾಯ್ಕರವರು ಆಶಯ ನುಡಿಯನ್ನಾಡಿದರು. ಉಪನ್ಯಾಸಕ ಶಿವಾನಂದ ನಾಯ್ಕ ವಂದಿಸಿದರು. ವಿದ್ಯಾರ್ಥಿ ಪಾಲಕ ಉಲ್ಲಾಸ ನಾಯ್ಕ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಹಿರಿಯ ಉಪನ್ಯಾಸಕರಾದ ಚಂದ್ರಹಾಸ ರಾಯ್ಕರ್ ಹಾಗೂ ನಾಗರಾಜ ಗೌಡ ಉಪಸ್ಥಿತರಿದ್ದರು.
625ಕ್ಕೆ 624 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ದ್ವಿತೀಯನಾದ ಡಾ. ಎ. ವಿ. ಬಾಳಿಗಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ದಿಶಾಂತ ದಯಾನಂದ ನಾಯ್ಕ, 621 ಅಂಕಗಳನ್ನು ಪಡೆದು ಜಿಲ್ಲೆಗೆ ದ್ವಿತೀಯ ಮತ್ತು ರಾಜ್ಯಕ್ಕೆ ಐದನೆಯ ಸ್ಥಾನದ ಭಟ್ಕಳದ ತೆರ್ನಮಕ್ಕಿಯ ಕೆ ಪಿ ಎಸ್ ನ ಸಾನಿಕಾ ಬೈಲೂರು, ಕುಮಟಾದ ಸಿ ವಿ ಎಸ್ ಕೆ ಪ್ರೌಢ ಶಾಲೆಯ ರಾಘವ ಜೈ ರಾಮ್ ಹೆಗಡೆ, 620 ಅಂಕಗಳೊAದಿಗೆ ಜಿಲ್ಲೆಗೆ ತೃತೀಯ ಹಾಗೂ ರಾಜ್ಯಕ್ಕೆ ಆರನೆಯ ಸ್ಥಾನದ ಭಟ್ಕಳದ ಆನಂದಾಶ್ರಮ ಪ್ರೌಢ ಶಾಲೆಯ ಪ್ರಥಮ್ ನಾಗರಾಜ ನಾಯ್ಕ, ತೆರ್ನಮಕ್ಕಿಯ ಕೆ ಪಿ ಎಸ್ ನ ವರ್ಷಿತಾ ಶಿವಕುಮಾರ ನಾಯ್ಕ, ಹಾಗೂ 619 ಅಂಕಗಳನ್ನು ಪಡೆದು ಜಿಲ್ಲೆಗೆ ಚತುರ್ಥ ಹಾಗೂ ರಾಜ್ಯಕ್ಕೆ ಏಳನೆಯ ರ್ಯಾಂಕ್ ನ್ನು ಪಡೆದ ಶಿರಾಲಿಯ ವೈಭವಿ ದೇವಾನಂದ ನಾಯಕರವರು ಅಭಿನಂದನೆಗೆ ಭಾಜನರಾದರು.

More Stories
ಅಯುಷ್ ಶೆಟ್ಟಿಯವರಿಗೆ ಮುಖ್ಯಮಂತ್ರಿಯವರಿಂದ ಗೌರವಾರ್ಪಣೆ
ಭಟ್ಕಳದಲ್ಲಿ “ಚಿಣ್ಣರ ಮೇಳ – 3” ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ
ಶ್ರೀ ಸತ್ಯಸಾಯಿ ಕರಿಕಾನ ಪರಮೇಶ್ವರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ