May 24, 2026

ಕೆ. ಆರ್.ಪೇಟೆ ಪಟ್ಟಣದಲ್ಲಿ ಮಿಂಚಿನ ಸಂಚಾರ, ವಿವಿಧ ಹೋಟೆಲ್ ಗಳು ಹಾಗೂ ಬೇಕರಿಗಳ ಮೇಲೆ ದಾಳಿ, ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜಾಗೃತಿ

ಕೆ.ಆರ್.ಪೇಟೆ: ಪುರಸಭೆಯ ಆಡಳಿತಾಧಿಕಾರಿಗಳು ಹಾಗೂ ಪಾಂಡವಪುರ ಉಪ ವಿಭಾಗಾಧಿಕಾರಿಗಳಾದ ಕೆ.ಆರ್. ಶ್ರೀನಿವಾಸ್ ಅವರು ಇಂದು ಕೆ. ಆರ್.ಪೇಟೆ ಪಟ್ಟಣದಲ್ಲಿ ಮಿಂಚಿನ ಸಂಚಾರ ನಡೆಸಿ ವಿವಿಧ ಹೋಟೆಲ್ ಗಳು ಹಾಗೂ ಬೇಕರಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜಾಗೃತಿ ಮೂಡಿಸಿದರು.

ತಾಲೂಕು ಆಹಾರ ಸುರಕ್ಷತಾ ಅಧಿಕಾರಿ ಬಸವರಾಜು, ಹಿರಿಯ ಆರೋಗ್ಯ ಪರಿವೀಕ್ಷಕರಾದ ಶೀಳನೆರೆ ಸತೀಶ್, ಅಶೋಕ್, ಪರಿಸರ ಇಂಜಿನಿಯರ್ ಪ್ರಿಯಾಂಕಾ, ಗ್ರಾಮ ಆಡಳಿತಾಧಿಕಾರಿ ಜಗಧೀಶ್ ಅವರ ನೇತೃತ್ವದಲ್ಲಿ ಇಂದು ಪಟ್ಟಣದ ವಿವಿಧ ಬೇಕರಿಗಳು ಹಾಗೂ ಹೋಟೆಲ್ ಗಳ ಮೇಲೆ ದಾಳಿ ನಡೆಸಿದ ಪುರಸಭೆ ಆಡಳಿತ ಅಧಿಕಾರಿಗಳಾದ ಕೆಆರ್ ಶ್ರೀನಿವಾಸ್ ಪ್ಲಾಸ್ಟಿಕ್ ಬಳಕೆಯ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ, ಬೇಕರಿಗಳು ಹಾಗೂ ಹೋಟೆಲ್ ಗಳಲ್ಲಿ ಪಾರ್ಸಲ್ ಮಾಡಲು ಬಳಸುತ್ತಿದ್ದ ಪ್ಲಾಸ್ಟಿಕ್ ಹ್ಯಾಂಡ್ ಕವರ್‌ಗಳು ಹಾಗೂ ಪ್ಲಾಸ್ಟಿಕ್ ಶೀಟುಗಳನ್ನು ವಶಪಡಿಸಿಕೊಂಡರು. ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಕೇಕುಗಳು ಸಿಹಿ ತಿಂಡಿಗಳು ಹಾಗೂ ಗೋಬಿ ಮಂಚೂರಿ ತಯಾರಿಕೆಯಲ್ಲಿ ಕೆಮಿಕಲ್ ಯುಕ್ತ ಬಣ್ಣಗಳನ್ನು ಬಳಸುತ್ತಿರುವುದನ್ನು ಗಮನಿಸಿದ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ರಾಸಾಯನಿಕ ಹಾಗೂ ವಿಷದಿಂದ ಕೂಡಿರುವ ಕೃತಕ ಬಣ್ಣಗಳನ್ನು ಆಹಾರ ಉತ್ಪಾದನೆಯಲ್ಲಿ ಬಳಸಿ ಶ್ರೀಸಾಮಾನ್ಯರ ಆರೋಗ್ಯದೊಂದಿಗೆ ಚೆಲ್ಲಾಟವಾಡದೇ, ವಿಷದಿಂದ ಕೂಡಿರುವ ಕೆಮಿಕಲ್ ಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಇಲ್ಲದಿದ್ದರೆ ಇಂತಹ ಹೋಟೆಲ್ ಗಳು, ಬೇಕರಿಗಳು ಹಾಗೂ ಅಂಗಡಿ ಮುಂಗಟ್ಟುಗಳನ್ನು ಸೀಲ್ ಮಾಡಿ ಮುಚ್ಚಿಸುವುದಾಗಿ ಎಚ್ಚರಿಕೆ ನೀಡಿದರು.

ಪೌರಕಾರ್ಮಿಕರು ಆರೋಗ್ಯ ಸಂವರ್ಧನೆಯ ಬಗ್ಗೆ ಕಾಳಜಿ ವಹಿಸಿ. ಎಸಿ’ ಮನವಿ…
ಕೆ.ಆರ್.ಪೇಟೆ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಹಾಗೂ ಪುರಸಭೆ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ ಕೆ.ಆರ್.ಶ್ರೀನಿವಾಸ್ ಪೌರ ಕಾರ್ಮಿಕರು ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ತಮ್ಮನ್ನುತಾವು ಸಮರ್ಪಣೆ ಮಾಡಿಕೊಂಡು, ತಮ್ಮ ಪಾಲಿನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಆದರೆಸದಾ ಅಶುಚಿತ್ವದಲ್ಲಿಯೇ ಕೆಲಸ ಮಾಡುತ್ತಾ ತಮ್ಮ ಆರೋಗ್ಯವನ್ನು ಸಂರಕ್ಷಣೆ ಮಾಡಿಕೊಳ್ಳುವ ದಿಕ್ಕಿನಲ್ಲಿ ಉದಾಸೀನತೆ ವಹಿಸಿ ವಿವಿಧ ರೋಗ-ರುಜನಗಳಿಗೆ ತುತ್ತಾಗಿ ಅಕಾಲಿಕವಾಗಿ ಸಾವನ್ನಪ್ಪುತ್ತಿದ್ದಾರೆ. ಪೌರಕಾರ್ಮಿಕ ಬಂಧುಗಳು ಮೊದಲು ತಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ತಮ್ಮ ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇಂದಿನ ದಿನಮಾನದಲ್ಲಿ ಮಾನವರಾದ ನಾವು ಸದಾ ಕಾಲವೂ ಮಾನಸಿಕ ಒತ್ತಡದಿಂದಲೇ ಜೀವನ ನಡೆಸುತ್ತಿರುವುದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕ್ಯಾನ್ಸರ್ ನಂತಹ ಮಾರಕ ರೋಗಗಳಿಂದ ನಾವು ಬಳಲುತ್ತಿದ್ದೇವೆ. ಆದ್ದರಿಂದ ನಾವು ಮೊದಲು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಪೌಷ್ಟಿಕಾಂಶಗಳಿAದ ಕೂಡಿರುವ ಆಹಾರ ಪದಾರ್ಥವನ್ನು ಸೇವಿಸಿ ನಮ್ಮ ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಂಕಲ್ಪ ಮಾಡಬೇಕಾಗಿದೆ ಎಂದು ತಿಳಿಸಿದ ಅವರು ಪೌರಕಾರ್ಮಿಕ ಬಂಧುಗಳಿಗೆ ಪೌಷ್ಟಿಕಾಂಶದ ಮಾತ್ರೆಗಳು, ಶಕ್ತಿವರ್ಧಕ ಟಾನಿಕ್, ಖರ್ಜೂರ, ಬಿಸ್ಕೆಟ್ ಹಾಗೂ ಕುಡಿಯಲು ಬಾದಾಮಿ ಹಾಲನ್ನು ವಿತರಿಸಿ ಕೆಲಸ ಮಾಡುವಾಗ ಕೈಗೆ ಗೌಸುಗಳು ಹಾಗೂ ಕಾಲುಗಳಿಗೆ ಶೂಗಳನ್ನು ಧರಿಸಿಕೊಂಡು ಮೂಗು ಬಾಯಿಗೆ ಮಾಸ್ಕನ್ನು ಹಾಕಿಕೊಂಡು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪೌರಕಾರ್ಮಿಕರ ಕುಟುಂಬದ ಸದಸ್ಯರು ಹಾಗೂ ಪುರಸಭೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author

error: Content is protected !!