August 21, 2026

ಭಟ್ಕಳ: ಜೆಡಿಎಸ್ ವತಿಯಿಂದ ಚೆನ್ನಮ್ಮ ಅವರಿಗೆ ಶ್ರದ್ಧಾಂಜಲಿ

ಭಟ್ಕಳ: ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರಿಗೆ ಜಿಲ್ಲಾ ಜೆಡಿಎಸ್ ವತಿಯಿಂದ ಜಿಲ್ಲಾಧ್ಯಕ್ಷ ಸೂರಜ್ ನಾಯ್ಕ ಸೋನಿ ಅವರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಎಲ್ಲರಿಗೂ ತಾಯಿಯಂತಿದ್ದರು:

ಈ ಸಂದರ್ಭದಲ್ಲಿ ಮಾತನಾಡಿದ ಸೂರಜ್ ನಾಯ್ಕ ಸೋನಿ, “ಚೆನ್ನಮ್ಮ ಅವರ ಅಗಲಿಕೆ ಅತ್ಯಂತ ದುಃಖದಾಯಕವಾಗಿದೆ. ಅವರು ಕೇವಲ ದೇವೇಗೌಡರ ಕುಟುಂಬದ ತಾಯಿಯಾಗಿರದೆ, ಎಲ್ಲರಿಗೂ ತಾಯಿಯಂತಿದ್ದ ಮಹಾತಾಯಿಯಾಗಿದ್ದರು. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕುಟುಂಬಕ್ಕೆ ನೀಡಲಿ” ಎಂದು ಪ್ರಾರ್ಥಿಸಿದರು.

ಕಾರ್ಯಕರ್ತರ ಅನ್ನಪೂರ್ಣೆ:

ತಾಲೂಕು ಜೆಡಿಎಸ್ ಅಧ್ಯಕ್ಷ ಈಶ್ವರ ನಾಯ್ಕ ಮಾತನಾಡಿ, “ಚೆನ್ನಮ್ಮ ಅವರು ದೇವೇಗೌಡರ ಕುಟುಂಬದ ಅನ್ನಪೂರ್ಣೆಯಾಗಿರುವುದಷ್ಟೇ ಅಲ್ಲ, ಪಕ್ಷದ ಕಾರ್ಯಕರ್ತರಿಗೂ ಅನ್ನಪೂರ್ಣೆಯಾಗಿದ್ದರು. ಮನೆಗೆ ಬಂದವರನ್ನು ಆತ್ಮೀಯವಾಗಿ ಆತಿಥ್ಯ ನೀಡಿ ಕಳುಹಿಸುತ್ತಿದ್ದ ಅವರ ನಿಧನದಿಂದ ಕಾರ್ಯಕರ್ತರೂ ಕುಟುಂಬದಷ್ಟೇ ನೋವು ಅನುಭವಿಸುತ್ತಿದ್ದಾರೆ” ಎಂದು ಹೇಳಿದರು.

ರಾಜಕೀಯ ಯಶಸ್ಸಿಗೆ ಪ್ರೇರಣಾ ಶಕ್ತಿ:

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಾನಂದ ಪೈ ಮಾತನಾಡಿ, “ಚೆನ್ನಮ್ಮ ಅವರ ನಿಧನದಿಂದ ರಾಜ್ಯಕ್ಕೆ ಅಪಾರ ನಷ್ಟವಾಗಿದೆ. ದೇವೇಗೌಡರ ರಾಜಕೀಯ ಬದುಕಿನ ಏಳಿಗೆಯಲ್ಲಿ ಅವರು ನೀಡಿದ ಬೆಂಬಲವೇ ಕರ್ನಾಟಕದಿಂದ ದೇಶದ ಪ್ರಧಾನಿಯಾಗುವವರೆಗೆ ಪ್ರೇರಣಾ ಶಕ್ತಿಯಾಯಿತು” ಎಂದು ಸ್ಮರಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ಜೀವನ ನಾಯ್ಕ, ಹರ್ಷ ಅಡಿಗ, ಪುನೀತ ಆಚಾರಿ, ಈಶ್ವರ, ಮಹಾಬಲೇಶ್ವರ ಹೆಗಡೆ, ಲಕ್ಷ್ಮಣ ಹಳ್ಳೇರ, ಅಮ್ಜದ್ ಎಸ್.ಎಂ. ಸೇರಿದಂತೆ ಅನೇಕ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

About The Author

error: Content is protected !!