August 24, 2026

ನಮ್ಮ ಪರಂಪರೆ ನಮ್ಮ ಹೆಮ್ಮೆ, ಸಂರಕ್ಷಣೆ ನಮ್ಮ ಜವಾಬ್ದಾರಿ: ತೆರಕಣಾಂಬಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಶ್ರಮದಾನ

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಮಾರುತಿ ದೇವಸ್ಥಾನದ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ‘ನಮ್ಮ ಪರಂಪರೆ ನಮ್ಮ ಹೆಮ್ಮೆ – ಅದರ ಸಂರಕ್ಷಣೆ ನಮ್ಮ ಜವಾಬ್ದಾರಿ’ ಎಂಬ ವಿನೂತನ ಶೀರ್ಷಿಕೆಯಡಿ ಸ್ವಚ್ಛತಾ ಕಾರ್ಯ ಹಾಗೂ ಶ್ರಮದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ಸಂಪೂರ್ಣ ನಯನ ಫೌಂಡೇಶನ್ (ಉಡೀಗಾಲ), ಇನ್ನರ್ ವೀಲ್ ಕ್ಲಬ್ ಆಫ್ ರಾಜಮಹಲ್ ವಿಲಾಸ್ (ಬೆಂಗಳೂರು), ತಾಲೂಕು ಆಡಳಿತ ಹಾಗೂ ವಿವಿಧ ಸಂಘ-ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಸಂಪೂರ್ಣ ನಯನ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ರಜಿನಿ ತಿವಾರಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಪೂರ್ಣ ನಯನ ಫೌಂಡೇಶನ್ ಅಧ್ಯಕ್ಷೆ ಶ್ರೀಮತಿ ರಜನಿ ತಿವಾರಿ:

“ನಾವೆಲ್ಲರೂ ಭವ್ಯ ಪರಂಪರೆ, ವೈವಿಧ್ಯಮಯ ಹಾಗೂ ಶ್ರೀಮಂತ ಚಾರಿತ್ರಿಕ ಹಿನ್ನೆಲೆ ಹೊಂದಿರುವ ಭಾರತದ ನೆಲದಲ್ಲಿ ಬದುಕುತ್ತಿದ್ದೇವೆ. ದೇಶದ ಪ್ರತಿಯೊಂದು ಗ್ರಾಮ, ಪಟ್ಟಣಕ್ಕೂ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ನಮ್ಮ ದೇವಾಲಯ, ಮಸೀದಿ, ಚರ್ಚ್‌ಗಳು ಮಾತ್ರವಲ್ಲದೆ ಕೆರೆ, ನದಿ, ಜಲಾಶಯ ಹಾಗೂ ಕಲ್ಯಾಣಿಗಳಿಗೂ ಶತಮಾನಗಳ ಇತಿಹಾಸವಿದೆ.”

“ಪ್ರಕೃತಿಯನ್ನು ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುದ್ಧವಾಗಿ ಇಟ್ಟುಕೊಂಡಾಗ ಮಾತ್ರ ಅದು ನಮಗೆ ಶುದ್ಧವಾದ ಆಮ್ಲಜನಕವನ್ನು ನೀಡುತ್ತದೆ. ಆದ್ದರಿಂದ ಸ್ವಾತಂತ್ರ್ಯ ದಿನದ ಪ್ರಯುಕ್ತ ನಮ್ಮ ಐತಿಹಾಸಿಕ ಮತ್ತು ನೈಸರ್ಗಿಕ ತಾಣಗಳನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಈ ವಿನೂತನ ಶ್ರಮದಾನ ಹಮ್ಮಿಕೊಳ್ಳಲಾಗಿದೆ,” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ರಾಜಮಹಲ್ ವಿಲಾಸ್ ಬೆಂಗಳೂರು ಇದರ ಅಧ್ಯಕ್ಷೆ ಶ್ರೀಮತಿ ಅನುರಾಧ ಸುವರ್ಣ, ಕಾರ್ಯದರ್ಶಿ ಶ್ರೀಮತಿ ಸುಮಾ ಈರಣ್ಣ, ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ರಮೇಶ್, ರಾಜಸ್ವ ನಿರೀಕ್ಷಕ (RI) ನಾಗೇಂದ್ರ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಮಹದೇವ್ ಸ್ವಾಮಿ, ಶ್ರಮದಾನ ಶಿಬಿರದ ಸಂಯೋಜಕರು ಹಾಗೂ ಸಾಹಿತಿಗಳಾದ ಕಾಳಿಂಗ ಸ್ವಾಮಿ ಸಿದ್ಧಾರ್ಥ್ ಉಪಸ್ಥಿತರಿದ್ದರು.

ಹಾಗೆಯೇ ಮಾಜಿ ಅಧ್ಯಕ್ಷ ರಾಜೇಶ್ (ಚಿನ್ನಸ್ವಾಮಿ ಹೋಟೆಲ್ ಮಾಲೀಕರು), ಮಾಜಿ ಗ್ರಾ.ಪಂ. ಸದಸ್ಯ ಗೋವಿಂದ, ಮಾಜಿ ತಾ.ಪಂ. ಸದಸ್ಯ ಮಂಡಿ ಮಹೇಶ್, ಮುಖಂಡರಾದ ಮಹದೇವಪ್ಪ, ರವಿ ಬುದ್ಧಿ, ಆನಂದ ನಾಯಕ್, ರಮೇಶ್ ನಾಯಕ್, ಶ್ರೀನಿವಾಸ್ ತಿವಾರಿ ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರಮದಾನ ಮಾಡಿದರು.

ವರದಿ: ಸದಾನಂದ ಕನ್ನೇಗಾಲ. ಗುಂಡ್ಲಫೇಟೆ

About The Author

error: Content is protected !!