September 8, 2026

ಅನ್ನವೇ ದೇವರು, ಓಜಸ್ಸೇ ಜೀವಾಳ: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು

ಗೋಕರ್ಣ: ಅನ್ನವು ಆನಂದದ ಪ್ರತೀಕವಾಗಿದ್ದು, ಪರಬ್ರಹ್ಮನ ಸ್ವರೂಪವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಗೋಕರ್ಣದ ಅಶೋಕೆಯ ಮೂಲಮಠದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ಪ್ರವಚನ ನೀಡಿದರು.

ಆಹಾರದ ಶಕ್ತಿ ಮತ್ತು ಮೌಲ್ಯ: ಆಹಾರದ ಮೂಲಭೂತ ಗುಣವೇ ಆನಂದವಾಗಿದ್ದು, ಅದು ಸರ್ವೇಂದ್ರಿಯಗಳಿಗೆ ಸಂತೋಷ ನೀಡುತ್ತದೆ. ಆಯುಷ್ಯ, ಶಕ್ತಿ, ಸತ್ವ ಹಾಗೂ ಬುದ್ಧಿಯ ಕಾರ್ಯಕ್ಷಮತೆಗೆ ಸರಿಯಾದ ಆಹಾರವೇ ಕಾರಣವಾಗಿದೆ ಎಂದು ಶ್ರೀಗಳು ತಿಳಿಸಿದರು.

ಓಜಸ್ಸಿನ ಮಹತ್ವ: ದೇಹದಲ್ಲಿರುವ ರಸ-ರಕ್ತಾದಿ ಸಪ್ತಧಾತುಗಳ ಸಾರವೇ ಓಜಸ್ಸು. ತಾಯಿಯ ಗರ್ಭದಲ್ಲಿ ಜೀವಿಯ ಬೆಳವಣಿಗೆ ಆರಂಭವಾಗುವುದೇ ಈ ಓಜಸ್ಸಿನಿಂದ ಎಂದು ಚರಕ ಮಹರ್ಷಿಗಳು ಉಲ್ಲೇಖಿಸಿದ್ದಾರೆ. ಹೃದಯ ಭಾಗದಲ್ಲಿ ಅರ್ಧ ಬೊಗಸೆಯಷ್ಟಿರುವ ಈ ಅಮೃತದ್ರವವೇ ಜೀವಶಕ್ತಿಗೆ ಮೂಲವಾಗಿದ್ದು, ಸರಿಯಾದ ಆಹಾರ ಹಾಗೂ ಜೀವನಶೈಲಿಯಿಂದ ಇದನ್ನು ರಕ್ಷಿಸಿಕೊಳ್ಳಬೇಕು ಎಂದರು.

ಗುರುಭಿಕ್ಷಾ ಸೇವೆ: ಡಾ. ರಾಜಾರಾಮ ಮಡಿಕೇರಿ ಕುಟುಂಬದವರಿಂದ ಗುರುಭಿಕ್ಷಾ ಸೇವೆ ನೆರವೇರಿತು. ದಿನಪ್ರಧಾನರಾಗಿ ಗುಣಾಜೆ ರಾಮಕೃಷ್ಣ ಭಟ್ ದಂಪತಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಮರಾಠ ಸಮಾಜದಿಂದ ಸ್ವರ್ಣಪಾದುಕಾ ಪೂಜೆ: ಪಾರಂಪರಿಕವಾಗಿ ಶ್ರೀಮಠಕ್ಕೆ ನಡೆದುಕೊಳ್ಳುತ್ತಿರುವ ಮರಾಠ ಸಮಾಜದ ವತಿಯಿಂದ ಸ್ವರ್ಣಪಾದುಕಾ ಪೂಜೆ ನಡೆಯಿತು. ಜಿಲ್ಲಾ ಅಧ್ಯಕ್ಷ ಮಂಜುನಾಥ ತಿಮ್ಮ ಮರಾಠಿ, ಕುಮಟಾ ತಾಲೂಕು ಅಧ್ಯಕ್ಷ ಪುರುಷೋತ್ತಮ ಶೇಡಿಗದ್ದೆ ಸೇರಿದಂತೆ ಸಮಾಜದ ನೂರಾರು ಬಂಧುಗಳು ಉಪಸ್ಥಿತರಿದ್ದು ಶ್ರೀಗಳ ಆಶೀರ್ವಾದ ಪಡೆದರು.

About The Author

error: Content is protected !!