ಶಿರಸಿ : ಕ್ಷಯ ಮುಕ್ತ ಭಾರತದ ನಿರ್ಮಾಣ ನಮ್ಮೆಲ್ಲರ ಗುರಿ ಆಗಬೇಕು ಎಂದು ದಾಸನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ದೀಪ್ತಿ ನಾಯಕ ರವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ದಾಸನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಕ್ಷಯ ಮುಕ್ತ ಭಾರತಕ್ಕಾಗಿ ನೂರು ದಿನಗಳ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕ್ಷಯ ಮುಕ್ತ ಭಾರತಕ್ಕಾಗಿ ಅತ್ಯಾಧುನಿಕ ಏ ಐ ತಂತ್ರಜ್ಞಾನ ಮೊಬೈಲ್ ಹ್ಯಾಂಡೇಡ್ ಎಕ್ಸರೆಯು ಅತ್ಯಂತ ಉಪಯೋಗಕಾರಿಯಾಗಿದ್ದು ಎಂದು ಅವರು ತಿಳಿಸಿದರು.

ಹಿರಿಯ ಕ್ಷಯರೋಗ ಮೇಲ್ವಿಚಾರಕ ಉದಯಶಂಕರ ರವರು ಮಾತನಾಡಿ ಕ್ಷಯ ರೋಗ ನಿರ್ಮೂಲನೆಗಾಗಿ ದೇಶಾದ್ಯಂತ ನೂರು ದಿನಗಳ ಅಭಿಯಾನ ಕಾರ್ಯಕ್ರಮ ಪ್ರಾರಂಭಗೊAಡಿದ್ದು ಕ್ಷಯ ರೋಗವನ್ನು ಬುಡ ಸಮೇತ ಕಿತ್ತು ಹಾಕಲು ಕಪ ಪರೀಕ್ಷೆ, ಎಕ್ಸರೇ, ಸಿಬಿನಾಟ ಮುಂತಾದವುಗಳ ಮೂಲಕ ಶೀಘ್ರ ರೋಗ ಪತ್ತೆ ಮಾಡಿ ಉಚಿತವಾಗಿ ಚಿಕಿತ್ಸೆ ಪಡೆದು ರೋಗವನ್ನು ಬೇರು ಸಮೇತ ಕಿತ್ತು ಹಾಕಬಹುದು ಎಂದರು. ಮೊಬೈಲ್ ಹ್ಯಾಂಡೇಡ್ ಎಕ್ಸರೆಯು ಕ್ಷಯದ ಜೊತೆಗೆ 12 ಬೇರೆ ಬೇರೆ ಕಾಯಿಲೆಗಳನ್ನು ಪತ್ತೆ ಹಚ್ಚಲಿದ್ದು, 2030 ಹೊತ್ತಿಗೆ ಕ್ಷಯಮುಕ್ತ ಭಾರತ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿ ಸಿ ಹಿರೇಮಠ ರವರು ಮಾತನಾಡಿ ಕ್ಷಯ ರೋಗ ಕೆಮ್ಮು ಕಫದ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ ಆಗಿದ್ದು ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮದ ನಂತರ ವೈದ್ಯಾಧಿಕಾರಿಗಳಾದ ಡಾ. ದೀಪ್ತಿ ನಾಯಕ ರವರು ಆರೋಗ್ಯ ತಪಾಸಣೆ ನಡೆಸಿದರೆ, ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ವಿಕಿರಣ ಶಾಸ್ತ್ರ ಚಿತ್ರಣ ಅಧಿಕಾರಿ ಲಕ್ಷ್ಮಣ ಹಾಗೂ ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಆಂಜನೇಯ ರವರು ಕ್ಷಕಿರಣ ತಪಾಸಣೆ ನಡೆಸಿಕೊಟ್ಟರು.

ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಶ್ರೀಮತಿ ಚೈತ್ರಾ ಧಾರವಾಡರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರೆ, ಆರೋಗ್ಯ ಸುರಕ್ಷತಾ ಅಧಿಕಾರಿ ತೈಸಿನ್ ವಂದಿಸಿದರು.
ದಾಸನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಸುಮಾರು 100ಕ್ಕೂ ಅಧಿಕ ಜನರ ಆರೋಗ್ಯ ತಪಾಸಣೆ ಮಾಡಿ ಎಕ್ಸರೇ ತಪಾಸಣೆ ಮಾಡಲಾಯಿತು.

More Stories
ಪೌಷ್ಟಿಕ ಆಹಾರದ ಸೇವನೆಯಿಂದ ಕ್ಷಯ ರೋಗಿಗಳ ರೋಗನಿರೋಧಕ ಶಕ್ತಿ ಹೆಚ್ಚಳ – ಉದಯಶಂಕರ
ಕ್ಷಯರೋಗದ ಬಗ್ಗೆ ಜಾಗೃತಿ ಅಗತ್ಯ – ಡಾ.ಇಲಿಯಾಸ್ ಹವಾಲ್ದಾರ್.
ಜನರ ಆರೋಗ್ಯ ಸಂರಕ್ಷಣೆಗೆ ನಿಸರ್ಗಮನೆ ಮಹತ್ವದ ಕೊಡುಗೆಯಿದೆ : ನ್ಯಾ. ಹುದ್ದಾರ