

ಭಟ್ಕಳ (ಆಗಸ್ಟ್ 03, 2026): ನಗರದ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವವು ಆಗಸ್ಟ್ 5 ಮತ್ತು 6ರಂದು ನೆರವೇರಲಿದ್ದು, ಜಾತ್ರೆಯನ್ನು ಸುಸೂತ್ರ ಹಾಗೂ ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ದೇವಸ್ಥಾನ ಆಡಳಿತ ಮಂಡಳಿ ಪ್ರತಿನಿಧಿಗಳ ಜಂಟಿ ಸಭೆ ನಡೆಯಿತು.
ಸಹಾಯಕ ಆಯುಕ್ತ (AC) ಮಹೇಶ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಜಾತ್ರೆಯ ಭದ್ರತೆ, ಜನಸಂದಣಿ ನಿಯಂತ್ರಣ, ಸಂಚಾರ ಮಾರ್ಗ ಬದಲಾವಣೆ ಹಾಗೂ ಭಕ್ತರಿಗೆ ಬೇಕಾದ ಮೂಲಸೌಕರ್ಯಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ಕೈಗೊಂಡ ಪ್ರಮುಖ ತೀರ್ಮಾನಗಳು:
ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್:
ಜಾತ್ರೆಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ ದೇವಸ್ಥಾನದ ಪರಿಸರ ಹಾಗೂ ಮೆರವಣಿಗೆ ಸಾಗುವ ಪ್ರಮುಖ ಮಾರ್ಗಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲು ನಿರ್ಧರಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಶೇಷ ನಿಗಾ ವಹಿಸಲು ಸೂಚಿಸಲಾಗಿದೆ.

ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ:
ಜಾತ್ರೆಯ ದಿನಗಳಲ್ಲಿ ತಡೆರಹಿತ ವಿದ್ಯುತ್ ಪೂರೈಕೆ ಮಾಡಲು ಹೆಸ್ಕಾಂ (HESCOM) ಇಲಾಖೆಗೆ ನಿರ್ದೇಶನ ನೀಡಲಾಗಿದೆ. ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಸೌಕರ್ಯವನ್ನು ನಗರಸಭೆ ಕಲ್ಪಿಸಲಿದೆ.

ಸಂಚಾರ ನಿಯಂತ್ರಣ ಹಾಗೂ ಹೆಚ್ಚುವರಿ ಬಸ್:
ಆಗಸ್ಟ್ 5ರಂದು ಬೆಳಿಗ್ಗೆ ನಡೆಯುವ ‘ಮಾರಿ ಪ್ರತಿಷ್ಠಾಪನಾ ಮೆರವಣಿಗೆ’ ಹಾಗೂ ಆಗಸ್ಟ್ 6ರ ಸಂಜೆ ನಡೆಯುವ ‘ಮಾರಿ ವಿಸರ್ಜನಾ ಮೆರವಣಿಗೆ’ ವೇಳೆ ಸಂಚಾರ ದಟ್ಟಣೆ ನಿಯಂತ್ರಿಸಲು ವಿಶೇಷ ವ್ಯವಸ್ಥೆ ಮಾಡಲಾಗುತ್ತದೆ. ಜಾಲಿ ಸಮುದ್ರ ತೀರದಲ್ಲಿ ವಿಸರ್ಜನೆ ನೆರವೇರಿದ ಬಳಿಕ ಭಕ್ತರು ನಗರಕ್ಕೆ ಮರಳಲು ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಸಮ್ಮತಿಸಿದ್ದಾರೆ.


ಡಿವೈಎಸ್ಪಿ ಮಹೇಶ್, ನಗರಸಭೆ ಮುಖ್ಯಾಧಿಕಾರಿ ಬಾಬಾ ಸಾಹೇಬ್ ಮಾನೆ, ಸಿಪಿಐ ದಿವಾಕರ, ಎಸ್ಐಗಳಾದ ನವೀನ್, ರವಿ, ತಿಮ್ಮಪ್ಪ ಮೊಗೇರ ಹಾಗೂ ನಗರಸಭೆ ಅಧಿಕಾರಿಗಳಾದ ವೆಂಕಟೇಶ ನಾವುಡಾ ಮತ್ತು ಸೋಜಿಯಾ ಸೋಮನ್ ,
ದೇವಸ್ಥಾನ ಆಡಳಿತ ಮಂಡಳಿಯ ಶ್ರೀಪಾದ ಕಂಚುಗಾರ, ಸುರೇಂದ್ರ ಭಟ್ಕಳ, ಮಾದೇವ ಮೊಗೇರ, ಮಾರುತಿ ಆಚಾರಿ, ಗೋವಿಂದ ನಾಯ್ಕ, ದಿನೇಶ ನಾಯ್ಕ, ಶ್ರೀಕಾಂತ ನಾಯ್ಕ, ಆಟೋ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಜಯಂತ ನಾಯ್ಕ ಹಾಗೂ ಕೃಷ್ಣಾನಂದ ಮಹಾಲೆ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿ ಸಲಹೆಗಳನ್ನು ನೀಡಿದರು.
About The Author




More Stories
ತೆರೆದ ಚರಂಡಿ ಹೊಂಡ: ಅಪಾಯದ ನಡುವೆ ಭಟ್ಕಳದ ವಾಹನ ಸವಾರರ ಸಂಚಾರ.
ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಮಂಕಾಳ್ ಎಸ್. ವೈದ್ಯ ಆಯ್ಕೆ: ಮಾಜಿ ಸಚಿವರಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ.
ಆಗಸ್ಟ್ 18ರಂದು ಭಟ್ಕಳದಲ್ಲಿ ಬೃಹತ್ ರಕ್ತದಾನ ಶಿಬಿರ: ಡಾ. ಸುರೇಶ ನಾಯಕ್ ಸ್ಮರಣಾರ್ಥ ಆಯೋಜನೆ