September 20, 2026

ಕರ್ನಾಟಕ ಸಂಘ ಕತಾರ್‌ನ ‘ಕನ್ನಡ ಪಾಠಶಾಲೆ’ಗೆ ನೂತನ ಕಾಯಕಲ್ಪದೊಂದಿಗೆ ಪುನರಾರಂಭ

ದೋಹಾ (ಕತಾರ್): ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಭಾಷೆ, ನಾಡು-ನುಡಿ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಉದ್ದೇಶದಿಂದ ಕರ್ನಾಟಕ ಸಂಘ ಕತಾರ್ (KSQ) ನಡೆಸಿಕೊಂಡು ಬರುತ್ತಿರುವ ‘ಕನ್ನಡ ಪಾಠಶಾಲೆ’ಯನ್ನು ಹೊಸ ಆಶಯ ಹಾಗೂ ನೂತನ ಕಾಯಕಲ್ಪದೊಂದಿಗೆ ಪುನರಾರಂಭಿಸಲಾಗಿದೆ.

ಡಾ. ಪುರುಷೋತ್ತಮ ಬಿಳಿಮಲೆ ಅವರಿಂದ ತರಬೇತಿ: ಶಿಕ್ಷಕರು ಮತ್ತು ಪೋಷಕರಿಗಾಗಿ ಆಯೋಜಿಸಲಾಗಿದ್ದ ವಿಶೇಷ ತರಬೇತಿ ಕಾರ್ಯಾಗಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ನಡೆಸಿಕೊಟ್ಟರು. ಮಕ್ಕಳ ಕಲಿಕೆಯ ಮಟ್ಟಕ್ಕೆ ಅನುಗುಣವಾಗಿ ಕನ್ನಡವನ್ನು ಪರಿಣಾಮಕಾರಿಯಾಗಿ ಬೋಧಿಸುವ ವಿಧಾನಗಳು, ವ್ಯವಸ್ಥಿತ ಪಠ್ಯಕ್ರಮ ಹಾಗೂ ಆಸಕ್ತಿದಾಯಕ ಬೋಧನಾ ತಂತ್ರಗಳ ಕುರಿತು ಅವರು ಮಾರ್ಗದರ್ಶನ ನೀಡಿದರು.

ಶಿಕ್ಷಕರ ದಿನಾಚರಣೆಯಲ್ಲಿ ಅಧಿಕೃತ ಘೋಷಣೆ: ಸಂಘವು ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಡಾ. ಬಿಳಿಮಲೆ ಅವರ ಸಮ್ಮುಖದಲ್ಲಿ ಪಾಠಶಾಲೆಯ ಪುನರಾರಂಭವನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಈ ವೇಳೆ ಸ್ವಯಂಪ್ರೇರಿತವಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಕೊಡುಗೆಯನ್ನು ಶ್ಲಾಘಿಸಲಾಯಿತು.

ಸಮಾನತೆಯ ಸಂಕೇತವಾಗಿ ಟಿ-ಶರ್ಟ್ ವಿತರಣೆ: ಶಶಿಧರ್ ಹೆಚ್. ಬಿ. ಸ್ವಾಗತಿಸಿದ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು, ಸಲಹಾ ಸಮಿತಿ ಅಧ್ಯಕ್ಷ ಡಾ. ರವಿ ಶೆಟ್ಟಿ, ಮಾಜಿ ಅಧ್ಯಕ್ಷ ಎಚ್. ಕೆ. ಮಧು, ಉಪಾಧ್ಯಕ್ಷ ಅನಿಲ್ ಭಾಸಗಿ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಮಕ್ಕಳಲ್ಲಿ ಒಗ್ಗಟ್ಟು ಮತ್ತು ಸಮಾನತೆ ಮೂಡಿಸುವ ಸಲುವಾಗಿ ಕೆಎಸ್‌ಕ್ಯೂ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ರೀತಿಯ ಟಿ-ಶರ್ಟ್‌ ಹಾಗೂ ನೀರಿನ ಬಾಟಲಿಗಳನ್ನು ವಿತರಿಸಲಾಯಿತು.

    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದೊಂದಿಗೆ ಈ ತರಗತಿಗಳು ಪ್ರತೀ ಶುಕ್ರವಾರ ಬೆಳಿಗ್ಗೆ 9.30ಕ್ಕೆ ಮೂರು ಹಂತಗಳಲ್ಲಿ ನಡೆಯಲಿದ್ದು, ಪ್ರವಾಸಿ ಕನ್ನಡಿಗರು ತಮ್ಮ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಿಸುವಂತೆ ಆಡಳಿತ ಮಂಡಳಿ ವಿನಂತಿಸಿದೆ.

    About The Author

    error: Content is protected !!