August 24, 2026

ಮಹಿಳೆಯೊಂದಿಗೆ ಮುರುಡೇಶ್ವರಕ್ಕೆ ಬಂದಿದ್ದ ಯುವಕ ಹೋಮ್‌ಸ್ಟೇಯಲ್ಲಿ ನೇಣಿಗೆ ಶರಣು

ಭಟ್ಕಳ: ವಿಚ್ಛೇದಿತ ಮಹಿಳೆಯೊಂದಿಗೆ ಮುರುಡೇಶ್ವರಕ್ಕೆ ಬಂದಿದ್ದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮೂಲದ ಯುವಕನೋರ್ವ ಹೋಮ್‌ಸ್ಟೇಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುರುಡೇಶ್ವರದಲ್ಲಿ ನಡೆದಿದೆ.

ಮೃತನ ಗುರುತು:  

ಮೃತನನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಲ್ಪನೆ ಗ್ರಾಮದ ವಿರೇಶ ರುದ್ರಪ್ಪ (25) ಎಂದು ಗುರುತಿಸಲಾಗಿದೆ. ಇವರು ಶಿವಮೊಗ್ಗದ ಆಯನೂರು ಕೆಇಬಿಯಲ್ಲಿ (KEB) ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಘಟನೆಯ ಹಿನ್ನೆಲೆ: 

ಪೊಲೀಸರ ಮಾಹಿತಿ ಪ್ರಕಾರ, ವಿರೇಶ ಅವರು ತಮ್ಮ ಊರಿನ, ತನಗಿಂತ ಸುಮಾರು 10 ವರ್ಷ ಹಿರಿಯ ವಿಚ್ಛೇದಿತ ಮಹಿಳೆಯೊಂದಿಗೆ ಮುರುಡೇಶ್ವರಕ್ಕೆ ಬಂದು, ಕಳೆದ ನಾಲ್ಕು ದಿನಗಳಿಂದ ಖಾಸಗಿ ಹೋಮ್‌ಸ್ಟೇಯಲ್ಲಿ ತಂಗಿದ್ದರು.

ಮಾತುಕತೆ ವಿಕೋಪಕ್ಕೆ ಹೋಗಿ ಆತ್ಮಹತ್ಯೆ:  

ತಡರಾತ್ರಿ ಇಬ್ಬರ ನಡುವೆ ಯಾವುದೋ ವಿಚಾರವಾಗಿ ವಾಗ್ವಾದ ನಡೆದಿದ್ದು, ಬಳಿಕ ರಾತ್ರಿ ಸುಮಾರು 12.30ರ ವೇಳೆಗೆ ವಿರೇಶ ಕೋಣೆಯೊಳಗೆ ತೆರಳಿ ಬೆಡ್‌ಶೀಟ್‌ನಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆಯ ವೇಳೆ ಮಹಿಳೆ ಕೋಣೆಯ ಹೊರಭಾಗದಲ್ಲಿದ್ದರೆಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.

ಪೋಲಿಸ್ ದೂರು ಹಾಗೂ ತನಿಖೆ: 

ಮೃತನ ತಂದೆ ರುದ್ರಪ್ಪ ಚೆನ್ನಬಸಪ್ಪ (55) ಅವರು ಮುರುಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮ್ಮ ಮಗನ ಸಾವಿನ ಹಿಂದಿನ ನೈಜ ಕಾರಣಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಎಸ್‌ಐ ಹಣಮಂತ ಬಿರಾದಾರ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

About The Author

error: Content is protected !!