July 25, 2026

ಪರವಾನಗಿ ಇಲ್ಲದೆ 11 ಜಾನುವಾರುಗಳ ಅಕ್ರಮ ಸಾಗಾಟ; ಗುಜರಾತ್ ಮೂಲದ ಮೂವರು ಸೇರಿ 4 ಜನರ ಬಂಧನ

ಭಟ್ಕಳ: ಪರವಾನಗಿ ಇಲ್ಲದೆ ಅಮಾನವೀಯ ರೀತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 11 ಜಾನುವಾರುಗಳನ್ನು ರಕ್ಷಿಸಿ, ನಾಲ್ವರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಶಪಡಿಸಿಕೊಂಡ ಜಾನುವಾರುಗಳ ಒಟ್ಟು ಮೌಲ್ಯ ಸುಮಾರು ₹4.60 ಲಕ್ಷ ಎಂದು ಅಂದಾಜಿಸಲಾಗಿದೆ.

ಆರೋಪಿಗಳು ಐಚರ್ ಲಾರಿಯಲ್ಲಿ (GJ-33/T-6060) ಮುರ್ಡೇಶ್ವರದಿಂದ ಭಟ್ಕಳದ ಕಡೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದರು. ಜಾನುವಾರುಗಳಿಗೆ ನೀರು, ಮೇವು ನೀಡದೆ, ಒಂದಕ್ಕೊಂದು ಬಿಗಿಯಾಗಿ ಕಟ್ಟಿ ವಧೆ ಮಾಡುವ ಉದ್ದೇಶದಿಂದ ಅಕ್ರಮವಾಗಿ ಕರೆದೊಯ್ಯಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪಿಎಸ್‌ಐ ಮಲ್ಲಿಕಾರ್ಜುನಯ್ಯ ಕೊರಾಣಿ ನೇತೃತ್ವದ ಪೊಲೀಸ್ ತಂಡ ಲಾರಿಯನ್ನು ತಡೆದು ಪರಿಶೀಲಿಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ತಕ್ಷಣವೇ ಜಾನುವಾರುಗಳನ್ನು ರಕ್ಷಿಸಿದ ಪೊಲೀಸರು ಲಾರಿ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಗಳ ವಿವರ:

ಮೊಹಮ್ಮದ್ ಔಫ್ ಅಬು ಮೊಹಮ್ಮದ್ ಹೈದರ – (ಕೋಕ್ತಿ ನಗರ, ಭಟ್ಕಳ) ವಿಜಯಬಾಯ್ ಜನಕಬಾಯ್ ಮಕ್ಕಾನ – (ಬೋಟಾಡ ಜಿಲ್ಲೆ, ಗುಜರಾತ್)      ತೇಜಾಬಾಯ್ ಸಾಜನಬಾಯ್ ಶಿಯಾಲಿಯಾ – (ಬೋಟಾಡ ಜಿಲ್ಲೆ, ಗುಜರಾತ್) ದಿಲೀಪ್‌ಬಾಯ್ ನಾರ್ದಬಾಯ್ ರಾಠೋಡ್ – (ಬೋಟಾಡ ಜಿಲ್ಲೆ, ಗುಜರಾತ್)

ಘಟನೆಗೆ ಸಂಬಂಧಿಸಿ ಪಿಎಸ್‌ಐ ಮಲ್ಲಿಕಾರ್ಜುನಯ್ಯ ಕೊರಾಣಿ ಅವರು ನೀಡಿದ ದೂರಿನನ್ವಯ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಭರಮಪ್ಪ ಬೆಳಗಲಿ ಅವರು ಪ್ರಕರಣದ ಮುಂದಿನ ತನಿಖೆ ಕೈಗೊಂಡಿದ್ದು, ಜಾನುವಾರು ಸಾಗಾಟದ ಮೂಲ ಹಾಗೂ ಇದರ ಹಿಂದೆ ಇರುವ ಜಾಲದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಯಾದ ವಿನೋದಕುಮಾರ್, ಸಂತೋಷ ನಾಯ್ಕ, ಕಿರಣ ತಿಳಗಂಜಿ, ಮಂಜುನಾಥ ಸಿ. ಖಾರ್ವಿ ಹಾಗೂ ಇತರರು ಭಾಗವಹಿಸಿದ್ದರು.

About The Author

error: Content is protected !!