July 25, 2026

ಕರ್ನಾಟಕ ಮಾದರ ಮಹಾಸಭಾ ಅಸ್ತಿತ್ವಕ್ಕೆ; ಸದಸ್ಯತ್ವ ಪಡೆದು ಸಂಘಟನೆ ಸದೃಢಗೊಳಿಸಲು ಕಲ್ಲಳ್ಳಿ ಬಸಪ್ಪ ಕರೆ

ಕೂಡ್ಲಿಗಿ (ವಿಜಯನಗರ ಜಿಲ್ಲೆ): ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜುಲೈ 18 ರಂದು ನಡೆದ ಪದಾಧಿಕಾರಿಗಳ ಮಹತ್ವದ ಸಭೆಯಲ್ಲಿ ‘ಕರ್ನಾಟಕ ಮಾದರ ಮಹಾಸಭಾ’ ಕೂಡ್ಲಿಗಿ ತಾಲೂಕು ಘಟಕವನ್ನು ಅಧಿಕೃತವಾಗಿ ಅಸ್ತಿತ್ವಕ್ಕೆ ತರಲಾಗಿದೆ.
ರಾಜ್ಯಾಧ್ಯಕ್ಷ ಹಾಗೂ ಸಚಿವ ಡಾ. ಕೆ.ಹೆಚ್. ಮುನಿಯಪ್ಪ ಮತ್ತು ಮಾಜಿ ಸಚಿವ ಹಾಗೂ ಮಹಾಸಭಾದ ರಾಜ್ಯ ಕಾರ್ಯದರ್ಶಿ ಹೆಚ್. ಆಂಜನೇಯ ಅವರ ನೇತೃತ್ವದಲ್ಲಿ ಸಂಘಟನೆಯು ರಾಜ್ಯಾದ್ಯಂತ ಪ್ರಗತಿ ಮತ್ತು ಪ್ರಬಲತೆ ಹೊಂದುತ್ತಿದೆ. ಅದರ ಮುಂದುವರಿದ ಭಾಗವಾಗಿ, ಜಿಲ್ಲಾಧ್ಯಕ್ಷ ನಿಂಬಲ ರಾಮಕೃಷ್ಣ ಅವರ ನಿರ್ದೇಶನದಂತೆ ಈ ತಾಲೂಕು ಘಟಕವನ್ನು ರಚಿಸಲಾಗಿದೆ.
ಜಿಲ್ಲಾ ಖಜಾಂಚಿ ಹಾಗೂ ವಕೀಲ ಡಿ.ಹೆಚ್. ದುರುಗೇಶ್, ಮಹಾಸಭಾದ ಜಿಲ್ಲಾ ಯುವ ಮುಖಂಡ ಹಾಗೂ ಕರ್ನಾಟಕ ಪೌರನೌಕರರ ಸಂಘದ ರಾಜ್ಯಾಧ್ಯಕ್ಷ ಜಿ. ಪ್ರಕಾಶ್ (ಟೈಗರ್) ಮತ್ತು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ. ಅಕ್ಷಯಕುಮಾರ್ ಅವರ ನೇತೃತ್ವದಲ್ಲಿ ಈ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.

ತಾಲೂಕು ಘಟಕದ ನೂತನ ಪದಾಧಿಕಾರಿಗಳ ವಿವರ:

ಅಧ್ಯಕ್ಷರು: ಹೆಚ್. ಸಿದ್ದಪ್ಪ (ಹಿರಿಯ ನಾಗರಿಕರು, ಕೂಡ್ಲಿಗಿ)

ಉಪಾಧ್ಯಕ್ಷರು: ಹೆಚ್. ಬಸಣ್ಣ (ತಿಮ್ಮನಹಳ್ಳಿ)

ಕಾರ್ಯದರ್ಶಿ: ಹೆಚ್. ಬಸಪ್ಪ (ಕೂಡ್ಲಿಗಿ)

ಖಜಾಂಚಿ: ಹೆಚ್. ಕೊಲ್ಲಾರಪ್ಪ

ಕಾರ್ಯಕಾರಿ ಸಮಿತಿ ಸದಸ್ಯರು: ಡಿ.ಹೆಚ್. ಮರಿಸ್ವಾಮಿ, ಎಮ್.ಬಿ. ಶಿವರಾಜ, ಕೆ. ತಿಪ್ಪೇಸ್ವಾಮಿ (ಪತ್ರಕರ್ತರು, ಅಮ್ಮನಕೇರಿ), ಸಾಲಿ ವೀರಣ್ಣ (ಮೊರಬ), ಶ್ರೀಮತಿ ವಿಶಾಲಾಕ್ಷಮ್ಮ ರಾಜಣ್ಣ (ಗುಡೇಕೋಟೆ).

    ಸಂಘಟನೆಯಿಂದಲೇ ಸಮಾಜದ ಸರ್ವತೋಮುಖ ಅಭಿವೃದ್ಧಿ

    ಸಭೆಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಮಾದಿಗ ಮಹಾಸಭಾದ ಹಿರಿಯರು ಹಾಗೂ ನಿವೃತ್ತ ಶಿಕ್ಷಕರಾದ ಕಲ್ಲಳ್ಳಿ ಬಸಪ್ಪ ಅವರು, ಸಮಾಜವು ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಸಂಘಟಿತರಾಗುವುದು ಇಂದಿನ ಅಗತ್ಯವಾಗಿದೆ ಎಂದರು.

    “ಸಮಾಜದ ಬಾಂಧವರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವವನ್ನು ಪಡೆದುಕೊಳ್ಳುವ ಮೂಲಕ ಮಹಾಸಭಾವನ್ನು ಸದೃಢಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳೆಲ್ಲರೂ ನಿಯಮಾನುಸಾರ ತಾಲೂಕಿನಾದ್ಯಂತ ಸಕ್ರಿಯವಾಗಿ ಸದಸ್ಯತ್ವ ನೋಂದಣಿ ಕಾರ್ಯದಲ್ಲಿ ತೊಡಗಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಬೇಕು.”
    – ಕಲ್ಲಳ್ಳಿ ಬಸಪ್ಪ, ಹಿರಿಯರು ಹಾಗೂ ನಿವೃತ್ತ ಶಿಕ್ಷಕರು

    ಸಭೆಯಲ್ಲಿ ಜಿಲ್ಲಾ ಖಜಾಂಚಿ ಡಿ.ಹೆಚ್. ದುರುಗೇಶ್, ಜಿ. ಪ್ರಕಾಶ್ (ಟೈಗರ್), ಶ್ರೀಮತಿ ವಿಶಾಲಾಕ್ಷಮ್ಮ ರಾಜಣ್ಣ, ಬಿ. ಅಕ್ಷಯಕುಮಾರ್ ಹಾಗೂ ನೂತನ ಅಧ್ಯಕ್ಷ ಹೆಚ್. ಸಿದ್ದಪ್ಪ ಅನಿಸಿಕೆಗಳನ್ನು ಹಂಚಿಕೊಂಡರು.

    ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಹೋರಾಟಗಾರ ಬಿ.ಟಿ. ಗುದ್ದಿ ಚಂದ್ರು, ಬಸವರಾಜ (ಪೂಜಾರಿಹಳ್ಳಿ), ಓಬಳೇಶ (ಕೆಂಚಮಲ್ಲನಹಳ್ಳಿ), ನಾಗರಾಜ (ಗುಡೇಕೋಟೆ), ಸಾರೆಪ್ಪ (ಮಡಕಲಕಟ್ಟೆ), ಎ.ಕೆ. ಮಂಜಪ್ಪ (ಮಾಳಹಳ್ಳಿ) ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಮಾದಿಗ ಸಮಾಜದ ಬಂಧುಗಳು ಉಪಸ್ಥಿತರಿದ್ದರು.
    ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಪತ್ರಕರ್ತ ಕೆ. ತಿಪ್ಪೇಸ್ವಾಮಿ (ಅಮ್ಮನಕೇರಿ ತಿಪ್ಪೇಸ್ವಾಮಿ) ಅವರು ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
    ವರದಿ: ವಂದೇ ಮಾತರಂ ವಿ.ಜಿ. ವೃಷಭೇಂದ್ರ, ಕೂಡ್ಲಿಗಿ.

    About The Author

    error: Content is protected !!