August 22, 2026

ಅರೇಅಂಗಡಿ ಕರಿಕಾನಪರಮೇಶ್ವರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ: ವಿದ್ಯಾರ್ಥಿಗಳಿಗೆ ದೇಶಸೇವೆಯ ಕರೆ

ಅರೇಅಂಗಡಿ (ಹೊನ್ನಾವರ): ಇಲ್ಲಿನ ಶ್ರೀ ಸತ್ಯಸಾಯಿ ಕರಿಕಾನಪರಮೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆ ಹಾಗೂ ದೇಶಭಕ್ತಿಯಿಂದ ಆಚರಿಸಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೈಲಾ ಹೆಗಡೆ ಅವರು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಬ್ರಿಟಿಷರ ದಬ್ಬಾಳಿಕೆ ಹಾಗೂ ತ್ಯಾಗದ ಸ್ಮರಣೆ:

ಬ್ರಿಟಿಷರ ವ್ಯಾಪಾರದಿಂದ ಸರ್ವಾಧಿಕಾರದವರೆಗಿನ ದಬ್ಬಾಳಿಕೆ ಮತ್ತು ಅದನ್ನು ಮೆಟ್ಟಿ ನಿಲ್ಲುವಲ್ಲಿ ಭಾರತೀಯ ಕ್ರಾಂತಿಕಾರಿಗಳು ಹಾಗೂ ಹೋರಾಟಗಾರರು ಮಾಡಿದ ತ್ಯಾಗ-ಬಲಿದಾನಗಳನ್ನು ಮುಖ್ಯೋಪಾಧ್ಯಾಯಿನಿ ಶೈಲಾ ಹೆಗಡೆ ಸ್ಮರಿಸಿದರು.

“ನನ್ನ ದೇಶ ನನ್ನ ಜನ, ನನ್ನ ಮಾನ ಪ್ರಾಣಧನ, ತೀರಿಸುವೆನೆ ಅದರ ಋಣ ಈ ಒಂದೇ ಜನುಮದಿ” ಎಂಬ ನುಡಿಯನ್ನು ಉಲ್ಲೇಖಿಸಿದ ಅವರು, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ದೇಶಕ್ಕಾಗಿ ತಮ್ಮಿಂದ ಸಾಧ್ಯವಾಗುವ ಸೇವೆಯನ್ನು ಮಾಡಲು ಮುಂಚೂಣಿಯಲ್ಲಿರಬೇಕು ಎಂದು ಕರೆ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪಥಸಂಚಲನ:

ಕಾರ್ಯಕ್ರಮದ ಭಾಗವಾಗಿ ಶಾಲಾ ವಿದ್ಯಾರ್ಥಿಗಳಿಂದ ಅತ್ಯಂತ ಶಿಸ್ತುಬದ್ಧ ಹಾಗೂ ಆಕರ್ಷಕ ಪಥಸಂಚಲನ (March Past) ನಡೆಯಿತು. ಬಳಿಕ ವಿದ್ಯಾರ್ಥಿಗಳಿಂದ ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಧ್ವಜಾರೋಹಣ ಹಾಗೂ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಯಶಸ್ವಿಗೊಳಿಸಿದರು.

About The Author

error: Content is protected !!