July 25, 2026

ಕಣ್ಣೆದುರೇ ಕಾಡುತ್ತಿದೆ ಸಾವಿನ ದಾರಿ: ಅಥಣಿ ಮಾರುಕಟ್ಟೆಯಲ್ಲಿ ಮುರಿದು ಬಿದ್ದ ಕಂಬದ ಕೆಳಗೆ ಜವರಾಯನ ಜೊತೆ ವ್ಯಾಪಾರ!

ಅಥಣಿ: ಪಟ್ಟಣದ ಅತ್ಯಂತ ಜನನಿಬಿಡ ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಹಾಗೂ ಸಣ್ಣ ವ್ಯಾಪಾರಿಗಳು ದಿನನಿತ್ಯ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಸಂಚರಿಸುವ ಭೀಕರ ವಾತಾವರಣ ನಿರ್ಮಾಣವಾಗಿದೆ!
ಪಟ್ಟಣದ ವಾರ್ಡ್ ನಂಬರ್ 5ರ ತಗಾರಿಗಲ್ಲಿಯ ಡಿಸಿಸಿ ಬ್ಯಾಂಕ್ ಹಾಗೂ ಓಂಕಾರ್ ಕಿರಾಣಿ ಜನರಲ್ ಸ್ಟೋರ್ ಎದುರಿಗಿರುವ ಕಾಯಿಪಲ್ಲೆ ಮಾರ್ಕೆಟ್‌ನ ’24’ ನಂಬರ್‌ನ ಕಬ್ಬಿಣದ ವಿದ್ಯುತ್ ಕಂಬ ತಳಭಾಗದಲ್ಲಿ ಸಂಪೂರ್ಣವಾಗಿ ತುಕ್ಕು ಹಿಡಿದು ಕಟ್ ಆಗಿದೆ. ಆದರೂ ಅಧಿಕಾರಿಗಳು ಕಂಡೂ ಕಾಣದಂತೆ ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮುರಿದ ಕಂಬದ ಕೆಳಗೇ ಕಾಯಿಪಲ್ಲೆ ವ್ಯಾಪಾರ!

ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಗೋಚರಿಸುವಂತೆ, ಈ ಅಪಾಯಕಾರಿ ಕಬ್ಬಿಣದ ಕಂಬದ ತಳಭಾಗ ಸಂಪೂರ್ಣವಾಗಿ ಮುರಿದು ನಿಂತಿದೆ. ವಿಶೇಷವೆಂದರೆ, ಇದೇ ಮುರಿದ ಕಂಬದ ಕೆಳಗೇ ಬಡ ಕಾಯಿಪಲ್ಲೆ ವ್ಯಾಪಾರಿಗಳು ಕುಳಿತು ವ್ಯಾಪಾರ ನಡೆಸುತ್ತಿದ್ದಾರೆ!
ಸಣ್ಣ ಗಾಳಿ ಬಂದರೂ ಅಥವಾ ಯಾವುದೇ ವಾಹನ ಸ್ಪರ್ಶಿಸಿದರೂ ಕಂಬ ನೆಲಕ್ಕುರುಳುವ ಸಾಧ್ಯತೆಯಿದ್ದು, ಭಾರಿ ಜನಸಂದಣಿ ಇರುವ ಸ್ಥಳದಲ್ಲೇ ಈ ದೊಡ್ಡ ಕಂಟಕ ಎದುರಾಗಿದೆ.

“ಅನಾಹುತವಾದರೆ ಯಾರು ಹೊಣೆ?”: ಹೆಸ್ಕಾಂ, ಪುರಸಭೆ ವಿರುದ್ಧ ಜನರ ಆಕ್ರೋಶ

ಇಷ್ಟೊಂದು ಅಪಾಯಕಾರಿ ಸ್ಥಿತಿಯಲ್ಲಿದ್ದರೂ ಸಂಬಂಧಪಟ್ಟ ಹೆಸ್ಕಾಂ (HESCOM) ಮತ್ತು ಪುರಸಭೆ ಇಲಾಖೆಯ ಅಧಿಕಾರಿಗಳು ನಿದ್ರಾಮುದ್ರೆಯಲ್ಲಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

“ಯಾವುದೇ ಮುನ್ಸೂಚನೆ ಇಲ್ಲದೆ ಕಂಬ ಬಿದ್ದು ಪ್ರಾಣಹಾನಿಯಾದರೆ ಅದಕ್ಕೆ ಯಾರು ಜವಾಬ್ದಾರರು? ಇಲಾಖೆಗೆ ತಕ್ಷಣವೇ ಮುಂಜಾಗ್ರತಾ ಕ್ರಮ ವಹಿಸಲು ಏನು ಅಡ್ಡಿ?”
ಸ್ಥಳೀಯ ಸಾರ್ವಜನಿಕರು ಹಾಗೂ ವ್ಯಾಪಾರಿಗಳು

ಆಡಳಿತ ಎಚ್ಚೆತ್ತುಕೊಳ್ಳುವುದೇ?            ಇನ್ನಾದರೂ ಹೆಸ್ಕಾಂ ಅಧಿಕಾರಿಗಳು, ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕಿದೆ. ಬಲಿಪೀಠದಂತಿರುವ ಈ ಕಬ್ಬಿಣದ ಕಂಬವನ್ನು ತೆರವುಗೊಳಿಸಿ, ಹೊಸ ಸಿಮೆಂಟ್ ಕಂಬವನ್ನು ಅಳವಡಿಸಿ ಸಾರ್ವಜನಿಕರ ಪ್ರಾಣ ರಕ್ಷಣೆ ಮಾಡುತ್ತಾರೋ ಅಥವಾ ದುರಂತ ಸಂಭವಿಸುವವರೆಗೂ ಕಾಯುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ವಿಶೇಷ ವರದಿ: ಮಹೇಶ್ ಶರ್ಮಾ

About The Author

error: Content is protected !!