August 21, 2026

ಸತ್ತಿ ಡಿಸಿಸಿ ಬ್ಯಾಂಕ್ ಇತಿಹಾಸದಲ್ಲೇ ಮೊದಲ ಬಾರಿಗೆ ನಿರ್ದೇಶಕರ ಭೇಟಿ: ಸುನೀತಾ ಎಸ್. ಐಹೊಳೆ ಅವರ ಜನಸ್ಪಂದನೆಗೆ ಭಾರೀ ಮೆಚ್ಚುಗೆ!

ಅಥಣಿ / ಸತ್ತಿ:   ಬೆಳಗಾವಿ ಜಿಲ್ಲೆಯ ಸತ್ತಿ ಡಿಸಿಸಿ ಬ್ಯಾಂಕ್ ಶಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಬ್ಯಾಂಕ್‌ನ ನಿರ್ದೇಶಕರೊಬ್ಬರು ನೇರವಾಗಿ ಶಾಖೆಗೆ ಭೇಟಿ ನೀಡಿ ರೈತರು, ಮಹಿಳೆಯರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಅಪರೂಪದ ಹಾಗೂ ಭರವಸೆಯ ಕ್ಷಣಕ್ಕೆ ಸತ್ತಿ ಸಾಕ್ಷಿಯಾಯಿತು.


ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸುನೀತಾ ಎಸ್. ಐಹೊಳೆ ಅವರ ಈ ದಿಢೀರ್ ಭೇಟಿ ಸ್ಥಳೀಯರಲ್ಲಿ ಹೊಸ ಭರವಸೆ ಮೂಡಿಸಿದ್ದು, ಅವರನ್ನು ಸ್ವಾಗತಿಸಲು ಬ್ಯಾಂಕ್ ಆವರಣದಲ್ಲಿ ಜನಸಾಗರವೇ ಹರಿದುಬಂದಿತ್ತು.

ಸನ್ಮಾನಗಳ ಮಹಾಪೂರ ಹಾಗೂ ಆತ್ಮೀಯ ಸ್ವಾಗತ:

ಸತ್ತಿ ಶಾಖೆಗೆ ಆಗಮಿಸಿದ ಸುನೀತಾ ಎಸ್. ಐಹೊಳೆ ಅವರನ್ನು ರೈತರು, ಗ್ರಾಹಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿ, ಭವ್ಯವಾಗಿ ಸನ್ಮಾನಿಸಿದರು.
ಭೇಟಿಯ ವೇಳೆ ಸ್ಥಳೀಯ ರೈತರು ಬ್ಯಾಂಕಿಂಗ್ ಸೇವೆಗಳು, ಸಾಲ ಸೌಲಭ್ಯ, ಖಾತೆ ನಿರ್ವಹಣೆ ಹಾಗೂ ಇತರ ಆಡಳಿತಾತ್ಮಕ ತೊಡಕುಗಳ ಕುರಿತು ನೇರವಾಗಿ ನಿರ್ದೇಶಕರ ಗಮನಕ್ಕೆ ತಂದರು. ಪ್ರತಿಯೊಂದು ಸಮಸ್ಯೆಯನ್ನೂ ತಾಳ್ಮೆಯಿಂದ ಆಲಿಸಿದ ಅವರು, ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರಲ್ಲದೆ, ಹಲವು ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಒದಗಿಸಿಕೊಟ್ಟರು.

ರೈತರ ಸಂತಸ ಹಾಗೂ ಮೆಚ್ಚುಗೆ:

“ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ನಾವು ಕಚೇರಿಗಳಿಗೆ ಅಲೆದಾಡಬೇಕಿತ್ತು. ಆದರೆ ಇಂದು ನಿರ್ದೇಶಕರೇ ನಮ್ಮ ಬಳಿಗೆ ಬಂದು ಮಾತು ಕೇಳಿರುವುದು ಹೊಸ ವಿಶ್ವಾಸ ತಂದಿದೆ. ಜನರ ಬಳಿಗೇ ಬಂದು ಆಡಳಿತ ನಡೆಸುವ ಇಂತಹ ನಾಯಕತ್ವವೇ ಸಮಾಜಕ್ಕೆ ಅಗತ್ಯ,” ಎಂದು ಸ್ಥಳೀಯ ರೈತರು ಹರ್ಷ ವ್ಯಕ್ತಪಡಿಸಿದರು.

“ಸೇವೆಯೇ ಮೊದಲ ಆದ್ಯತೆ” – ಸುನೀತಾ ಐಹೊಳೆ:

“ಡಿಸಿಸಿ ಬ್ಯಾಂಕ್ ಸಂಪೂರ್ಣವಾಗಿ ರೈತರ ಬ್ಯಾಂಕ್. ಇಲ್ಲಿ ಯಾವುದೇ ಪಕ್ಷ ಅಥವಾ ರಾಜಕಾರಣಕ್ಕೆ ಸ್ಥಾನವಿಲ್ಲ. ಪ್ರತಿಯೊಬ್ಬ ರೈತನೂ ನಮಗೆ ಸಮಾನ. ಪಕ್ಷ, ಜಾತಿ, ಮತ ಎಂಬ ಭೇದವಿಲ್ಲದೆ ರೈತರ ಹಾಗೂ ಗ್ರಾಹಕರ ಹಿತ ಕಾಯುವುದೇ ನಮ್ಮ ಮೊದಲ ಜವಾಬ್ದಾರಿ,” ಎಂಬ ದೃಢ ಸಂದೇಶವನ್ನು ಸುನೀತಾ ಎಸ್. ಐಹೊಳೆ ಈ ಸಂದರ್ಭದಲ್ಲಿ ಸಾರಿದರು.
ನೇರ ಸಂವಾದದ ಮೂಲಕ ಜನರ ದ್ವನಿಗೆ ಗೌರವ ನೀಡಿದ ಈ ಭೇಟಿಯನ್ನು ಸತ್ತಿ ಭಾಗದ ಸಾರ್ವಜನಿಕರು “ವಿಶ್ವಾಸದ ಭೇಟಿ ಹಾಗೂ ಜನಪರ ಆಡಳಿತದ ಮಾದರಿ” ಎಂದು ಬಣ್ಣಿಸಿದ್ದಾರೆ.
ವರದಿ: ಮಹೇಶ್ ಶರ್ಮಾ

About The Author

error: Content is protected !!